ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ: ಮಾಜಿ ಸಚಿವ ಸತೀಶ್ ಜಾರಕಿಹೊಳಿ
ಬೆಂಗಳೂರು, ಸೆ.11: ನಾನು ಯಾವುದೇ ಕಾರಣಕ್ಕೂ ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ. ನನ್ನ ಸಿದ್ಧಾಂತವೇ ಬೇರೆ, ಬಿಜೆಪಿ ಸಿದ್ಧಾಂತವೇ ಬೇರೆ. ನಾವು ಒಂದಾಗಲು ಸಾಧ್ಯವೇ ಇಲ್ಲ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೆ ಕಾರಣಕ್ಕೂ ಕಾಂಗ್ರೆಸ್ ಬಿಟ್ಟು, ಬಿಜೆಪಿ ಸೇರುವುದಿಲ್ಲ. ನನ್ನ ಸಿದ್ಧಾಂತಕ್ಕೂ, ಬಿಜೆಪಿ ಸಿದ್ಧಾಂತಕ್ಕೂ ಒಗ್ಗುವುದಿಲ್ಲ ಎಂದರು.
ರಾಜ್ಯಾದ್ಯಂತ ಮೌಢ್ಯಾಚರಣೆ ವಿರುದ್ಧ ಸಂಘಟನೆ ಮಾಡಿದ್ದೇನೆ. ಪ್ರಗತಿಪರರ ನಿಲುವಿನ ನನಗೆ ಒಂದು ಧರ್ಮವನ್ನು ಪ್ರತಿಪಾದಿಸುವ ಬಿಜೆಪಿ ಆಗಿ ಬರುವುದಿಲ್ಲ. ನಾನು ಕಾಂಗ್ರೆಸ್ನಲ್ಲೆ ಇರುತ್ತೇನೆ. ಯಾರು ಯಾವುದೇ ನಿರ್ಧಾರ ತೆಗೆದುಕೊಂಡರು ಅದು ಅವರ ವೈಯಕ್ತಿಕವಾದದ್ದು ಎಂದು ಅವರು ಹೇಳಿದರು.
ಪಕ್ಷ ಬಿಡುವವರನ್ನು ನಾನು ಬೆಂಬಲಿಸುವುದೂ ಇಲ್ಲ. ಅವರ ಬಗ್ಗೆ ಪ್ರತಿಕ್ರಿಯಿಸುವುದೂ ಇಲ್ಲ. ನನ್ನ ಅಭಿಪ್ರಾಯವನ್ನು ಹಿರಿಯ ಸಹೋದರ ರಮೇಶ್ ಜಾರಕಿಹೊಳಿಗೂ ತಿಳಿಸಿದ್ದೇನೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.