ದಿಲ್ಲಿ ನಿವಾಸದ ಮೇಲೆ ಐಟಿ ದಾಳಿ ಪ್ರಕರಣ: ಡಿಕೆ ಶಿವಕುಮಾರ್ಗೆ ಜಾಮೀನು
ಬೆಂಗಳೂರು, ಸೆ. 15: ಆದಾಯ ತೆರಿಗೆ(ಐಟಿ) ಇಲಾಖೆ ಅಧಿಕಾರಿಗಳು ದಿಲ್ಲಿಯಲ್ಲಿ ವಶಪಡಿಸಿಕೊಂಡಿದ್ದ 8.60 ಕೋಟಿ ರೂ.ದಾಖಲೆ ಇಲ್ಲದ ಹಣದ ಪ್ರಕರಣ ಸಂಬಂಧ ಸಚಿವ ಡಿ.ಕೆ.ಶಿವಕುಮಾರ್ ಸಹಿತ ಅವರ ಮೂವರು ಆಪ್ತರಿಗೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಶನಿವಾರ ಜಾಮೀನು ನೀಡಿದೆ.
ಸಚಿವ ಡಿ.ಕೆ.ಶಿವಕುಮಾರ್, ಶರ್ಮಾ ಟ್ರಾನ್ಸ್ಪೋರ್ಟ್ ಮಾಲಕ ಸುನಿಲ್ ಕುಮಾರ್ ಶರ್ಮಾ, ದಿಲ್ಲಿ ಕರ್ನಾಟಕ ಭವನದ ನೌಕರ ಆಂಜನೇಯ ಹಾಗೂ ರಾಜೇಂದ್ರ ಕೋರ್ಟ್ಗೆ ಖುದ್ದು ಹಾಜರಾಗಿ ಮನವಿ ಸಲ್ಲಿಸಿದ ಬಳಿಕ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಶಿವಕುಮಾರ್ ಸೇರಿ ನಾಲ್ವರೂ ತಲಾ 25 ಸಾವಿರ ರೂ.ನಗದು ಹಾಗೂ 1ಲಕ್ಷ ರೂ.ಬಾಂಡ್ ಶ್ಯೂರಿಟಿ ನೀಡಿದ್ದಾರೆ. ಈ ಸಂಬಂಧದ ಮೂರು ಪ್ರಕರಣಗಳಲ್ಲಿ ಈಗಾಗಲೇ ಜಾಮೀನು ದೊರೆತಿದೆ. ಎಲ್ಲರೂ ಜವಾಬ್ದಾರಿಯುತ ಸ್ಥಾನಗಳಲ್ಲಿದ್ದು, ತನಿಖೆಗೆ ಸಹಕಾರ ನೀಡುತ್ತಿದ್ದಾರೆ. ಅಲ್ಲದೆ, ಹಣ ತಮ್ಮದೆಂದು ಒಪ್ಪಿಕೊಂಡಿದ್ದಾರೆ. ಹೀಗಾಗಿ, ಜಾಮೀನು ನೀಡಬೇಕೆಂದು ಡಿಕೆಶಿ ಪರ ವಕೀಲರು ಮನವಿ ಮಾಡಿದರು.
ಆದಾಯ ತೆರಿಗೆ ಇಲಾಖೆ ಶಿವಕುಮಾರ್ ವಿರುದ್ಧ ನಾಲ್ಕು ಪ್ರಕರಣಗಳನ್ನು ದಾಖಲಿಸಿದ್ದು, ಮೂರರಲ್ಲಿ ಈಗಾಗಲೇ ಜಾಮೀನು ಸಿಕ್ಕಿದೆ. ಸಚಿವ ಶಿವಕುಮಾರ್ ಮತ್ತು ಅವರ ಆಪ್ತರ ಪರವಾಗಿ ವಕೀಲರಾದ ಬಿ.ವಿ.ಆಚಾರ್ಯ, ಶೇಷಾಚಲ, ನಂಜುಂಡರೆಡ್ಡಿ, ಸಂದೀಪ್ ಪಾಟೀಲ್, ಶ್ಯಾಂಸುಂದರ್ ವಾದ ಮಂಡಿಸಿದರು.
ಜಾಮೀನು ಅರ್ಜಿ ಸೆ.20ಕ್ಕೆ ವಿಚಾರಣೆಗೆ ಬರಬೇಕಿತ್ತು. ಆದರೆ, ಸೆ.20ರಂದು ಸಂಪುಟ ಸಭೆ ನಡೆಯಲಿದ್ದು, ಅದರಲ್ಲಿ ಪಾಲ್ಗೊಳ್ಳುವ ಅಗತ್ಯವಿದೆ. ಅನಂತರ ಪ್ರವಾಸ ಕಾರ್ಯಕ್ರಮವಿದೆ. ಇದರಿಂದಾಗಿ ಮುಂಚಿತವಾಗಿಯೇ ವಿಚಾರಣೆ ನಡೆಸುವಂತೆ ಶಿವಕುಮಾರ್ ಕೋರ್ಟ್ಗೆ ಮನವಿ ಸಲ್ಲಿಸಿದ್ದರಿಂದ ಇಂದೇ ವಿಚಾರಣೆ ನಡೆಯಿತು.
ಇದೇ ಪ್ರಕರಣದಲ್ಲಿ ಹೆಸರಿಸಲಾಗಿರುವ ಡಿಕೆಶಿ ಆಪ್ತ ಸಚಿನ್ ನಾರಾಯಣ್ ಅವರ ವಿಚಾರಣೆಗೆ ಹೈಕೋರ್ಟ್ ಈಗಾಗಲೇ ತಡೆಯಾಜ್ಞೆ ನೀಡಿದೆ. ಈ ಮೊಕದ್ದಮೆ ದಾಖಲಿಸುವ ಮೊದಲು ಸಕ್ಷಮ ಪ್ರಾಧಿಕಾರದ ಒಪ್ಪಿಗೆ ಪಡೆದಿಲ್ಲ. ಐಟಿ ಕಾಯಿದೆ 279ರಂತೆ ಇಲಾಖೆ ಆಯುಕ್ತರ ಅನುಮತಿ ಪಡೆಯಬೇಕು. ಆದರೆ, ಪ್ರಧಾನ ನಿರ್ದೇಶಕರ ಒಪ್ಪಿಗೆ ಪಡೆಯಲಾಗಿದೆ. ಈ ಕಾರಣಕ್ಕೆ ಸಚಿನ್ ವಿಚಾರಣೆಗೆ ಹೈಕೋರ್ಟ್ ತಾತ್ಕಾಲಿಕ ತಡೆ ಸಿಕ್ಕಿದೆ ಎನ್ನಲಾಗಿದೆ.
ಆರ್ಥಿಕ ಅಪರಾಧಗಳ ವಿಚಾರಣಾ ನ್ಯಾಯಾಲಯಕ್ಕೆ ಐಟಿ ಅಧಿಕಾರಿಗಳು ಸಲ್ಲಿಸಿರುವ 33 ಪುಟಗಳ ದೂರಿನಲ್ಲಿ, ಶಿವಕುಮಾರ್, ಸಚಿನ್ ನಾರಾಯಣ್, ಸುನಿಲ್ ಕುಮಾರ್ ಶರ್ಮಾ, ಆಂಜನೇಯ ಹಾಗೂ ರಾಜೇಂದ್ರ ದಿಲ್ಲಿಯ ಆರ್.ಕೆ.ಪುರಂನ ಮನೆ ಹಾಗೂ ಸಫ್ದರ್ಜಂಗ್ ಎನ್ಕ್ಲೇವ್ನ ಫ್ಲ್ಯಾಟ್ಗಳಲ್ಲಿ ಸಿಕ್ಕಿರುವ 8.60ಕೋಟಿ ರೂ.ಹಣದ ಮೂಲ ಕುರಿತು ವಿಭಿನ್ನ ಹೇಳಿಕೆ ನೀಡಿದ್ದಾರೆಂದು ದೂರಲಾಗಿದೆ.