ರಸ್ತೆ ಗುಂಡಿಗಳನ್ನು ಮುಚ್ಚದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಕಿಡಿ
ಬೆಂಗಳೂರು, ಸೆ.19: ರಸ್ತೆ ಗುಂಡಿಗಳನ್ನು ಮುಚ್ಚಲು ವಿಫಲರಾಗಿರುವ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಗುರುವಾರ ಬೆಳಗ್ಗೆಯೊಳಗೆ ನಗರದ ಎಲ್ಲ ರಸ್ತೆ ಗುಂಡಿಗಳನ್ನು ಮುಚ್ಚಬೇಕು ಎಂದು ಬಿಬಿಎಂಪಿಗೆ ತಾಕೀತು ಮಾಡಿದೆ.
ನಗರದ ರಸ್ತೆಗಳ ನಿರ್ವಹಣೆ ಸಂಬಂಧ ವಿಜಯನ್ ಮೆನನ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಅವರಿದ್ದ ಪೀಠ, ಬಿಬಿಎಂಪಿ ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿತಲ್ಲದೆ, ನಿಮ್ಮಿಂದ ಕೆಲಸ ಮಾಡಲು ಸಾಧ್ಯವಿಲ್ಲ ಎಂದಾದರೆ ಬಿಬಿಎಂಪಿಯನ್ನು ಮುಚ್ಚಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತು.
ಅಧಿಕಾರಿಗಳು ಏನು ಮಾಡುತ್ತಾರೋ ಗೊತ್ತಿಲ್ಲ. ಆದರೆ ಗುರುವಾರ ಬೆಳಗ್ಗೆಯೊಳಗೆ ನಗರದ ರಸ್ತೆಗಳು ಗುಂಡಿ ಮುಕ್ತವಾಗಬೇಕು. ಅಹೋರಾತ್ರಿ ಕೆಲಸ ಮಾಡಿಯಾದರೂ ರಸ್ತೆ ಗುಂಡಿ ಮುಚ್ಚುವ ಕೆಲಸ ಆಗಲೇಬೇಕು. ಗುರುವಾರ ಮತ್ತೆ ಅರ್ಜಿ ವಿಚಾರಣೆಗೆ ಬರುವುದರೊಳಗೆ ರಸ್ತೆಗುಂಡಿ ಮುಚ್ಚಿರುವ ಕುರಿತು ಪ್ರಮಾಣಪತ್ರ ಸಲ್ಲಿಸಬೇಕು ಎಂದು ಬಿಬಿಎಂಪಿಗೆ ಸೂಚಿಸಿತು.
ರಸ್ತೆ ಗುಂಡಿಗಳು ಬೆಂಗಳೂರಿನ ಸಮಸ್ಯೆಯ ಒಂದು ಭಾಗವಷ್ಟೇ. ಇಲ್ಲಿನ ಸಂಚಾರ ವ್ಯವಸ್ಥೆ ನಿಯಂತ್ರಣ ಮೀರಿ ಹೋಗಿದೆ. ಕಾಲಕಾಲಕ್ಕೆ ರಸ್ತೆಗಳ ನಿರ್ವಹಣೆ ಹಾಗೂ ಅಗಲೀಕರಣ ಸರಿಯಾಗಿ ನಡೆಯದ ಕಾರಣ ವಾಹನ ಸಂಚಾರ ದಟ್ಟಣೆ ಮಿತಿ ಮೀರಿ ಹೋಗಿದೆ. ಬೆಂಗಳೂರಿನ ವೈಭವ ಮರುಕಳಿಸಬೇಕು. ನಗರ ಸ್ವಚ್ಛಗೊಳ್ಳಲೇಬೇಕು. ಫ್ಲೆಕ್ಸ್ನಿಂದ ಆರಂಭಗೊಂಡ ಸ್ವಚ್ಛತಾ ಕಾರ್ಯ, ರಸ್ತೆಗುಂಡಿ ಮುಚ್ಚುವುದರೊಂದಿಗೆ ಮುಗಿಯಬೇಕು. ನಗರದ ಯಾವೊಂದು ರಸ್ತೆಯಲ್ಲೂ ಒಂದೇ ಒಂದು ಗುಂಡಿಯೂ ಕಾಣಸಿಗಬಾರದು ಎಂದ ನ್ಯಾಯಪೀಠ, ವಿಚಾರಣೆಯನ್ನು ಗುರುವಾರಕ್ಕೆ(ಸೆ.20) ಮುಂದೂಡಿತು.