ಸೆ.24 ಕ್ಕೆ 'ಪೂನಾ ಒಡಂಬಡಿಕೆ ಅಂದು-ಇಂದು' ಸಂವಾದ
ಬೆಂಗಳೂರು, ಸೆ.19: ದಲಿತ ಸಂಘರ್ಷ ಸಮಿತಿ ವತಿಯಿಂದ ಮಹಾತ್ಮ ಗಾಂಧೀಜಿ 1932ರ ಪೂನಾ ಒಪ್ಪಂದದಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಪರಾಮರ್ಶಿಸಲು ‘ಪೂನಾ ಒಡಂಬಡಿಕೆ ಅಂದು-ಇಂದು?’ ಕುರಿತು ಒಂದು ದಿನದ ಸಂವಾದ ಕಾರ್ಯಕ್ರಮವನ್ನು ಸೆ.24 ರಂದು ಹಮ್ಮಿಕೊಳ್ಳಲಾಗಿದೆ.
ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಅಂದು ಬೆಳಗ್ಗೆ 11ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಂವಾದ ಜರುಗಲಿದ್ದು, ಸಾಹಿತಿಗಳು, ಬರಹಗಾರರು, ಪ್ರಗತಿಪರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇಂದಿನ ಪರಿಸ್ಥಿತಿಯಲ್ಲಿ ಸುಮಾರು 86 ವರ್ಷಗಳ ಹಿಂದೆ ನಡೆದ ಒಪ್ಪಂದದ ಪುನರಾವಲೋಕನ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಹಿಂದೆ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿದ ವರ್ಗಗಳು ಇಂದು ಮೀಸಲಾತಿಗಾಗಿ ಬೀದಿಗಿಳಿಯುತ್ತಿದ್ದಾರೆ. ಇನ್ನೊಂದೆಡೆ ಪೂನಾ ಒಪ್ಪಂದದ ನಿರ್ಧಾರಗಳನ್ನು ಸರಕಾರ ಪಾಲಿಸುತ್ತಿಲ್ಲ. ಹಾಗಾಗಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಒಪ್ಪಂದದ ಮರು ವಿಮರ್ಶೆ ಸಂವಾದ ಜರುಗಲಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಮುಖಂಡರಾದ ಜೋತಪ್ಪ ಹೊಸಳ್ಳಿ, ನೆರಳೂರು ಮುನಿಕೃಷ್ಣಪ್ಪ, ಸಿದ್ದಾರ್ಥ ಶ್ರೀನಿವಾಸ್, ಮಣಿಪಾಲ್ ರಾಜಪ್ಪ ಉಪಸ್ಥಿತರಿದ್ದರು.