ಮಿಲಿಟರಿ ವಿಮಾನಗಳಲ್ಲಿ ನಮ್ಮ ಶಾಸಕರನ್ನು ಪುಣೆ, ಮುಂಬೈಗೆ ಕರೆದೊಯ್ಯಲು ಬಿಜೆಪಿ ಯೋಜನೆ: ಕುಮಾರಸ್ವಾಮಿ ಗಂಭೀರ ಆರೋಪ
ಬೆಂಗಳೂರು, ಸೆ.20: ಮಿಲಿಟರಿ ವಿಮಾನಗಳ ಮೂಲಕ ಕಾಂಗ್ರೆಸ್ ಹಾಗು ಜೆಡಿಎಸ್ ಶಾಸಕರನ್ನು ಪುಣೆ ಮತ್ತು ಮುಂಬೈಗೆ ಕರೆದೊಯ್ಯಲು ಬಿಜೆಪಿ ಮುಂದಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
“ಬಿಜೆಪಿ ಮತ್ತು ಯಡಿಯೂರಪ್ಪ ಎಲ್ಲಾ ಮಿತಿಗಳನ್ನು ಮೀರಿದ್ದಾರೆ. ಮಿಲಿಟರಿ ವಿಮಾನಗಳ ಮೂಲಕ ನಮ್ಮ ಶಾಸಕರನ್ನು ಮುಂಬೈ ಮತ್ತು ಪುಣೆಗೆ ಕರೆದೊಯ್ದು ನಂತರ ವಿಶ್ವಾಸಮತಯಾಚನೆಗೆ ಬೆಂಗಳೂರಿಗೆ ಕರೆದೊಯ್ಯುತ್ತೇವೆ ಎಂದು ಅವರು ನಮ್ಮ ಕೆಲ ಶಾಸಕರಿಗೆ ಹೇಳಿದ್ದಾರೆ. ಏನಿದು?” ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ನಮ್ಮ ಶಾಸಕರಿಗೆ ಬಿಜೆಪಿ 5 ಕೋಟಿ ರೂ. ನೀಡುವ ಮತ್ತು ಇತರ ಆಮಿಷಗಳನ್ನು ಒಡ್ಡಿದೆ. ಕಾಂಗ್ರೆಸ್ ಮತ್ತು ಬಿಜೆಪಿಯ 18 ಶಾಸಕರು ಈಗಾಗಲೇ ನಮ್ಮ ಮಾತನ್ನು ಒಪ್ಪಿದ್ದಾರೆ ಎಂದು ಯಡಿಯೂರಪ್ಪ ನಮ್ಮ ಕೆಲ ಶಾಸಕರಿಗೆ ಹೇಳಿದ್ದಾರೆ. ಶಾಸಕರ ಸಂಖ್ಯೆ 20 ದಾಟಿದರೆ ಅವರನ್ನು ಮುಂಬೈ ಮತ್ತು ಪುಣೆಗೆ ಕರೆದೊಯ್ಯಲು ಯೋಜನೆ ಹಾಕಿದ್ದಾರೆ. ಮಹಾರಾಷ್ಟ್ರದಲ್ಲಿರುವ ಬಿಜೆಪಿ ಸರಕಾರ ಅವರಿಗೆ ರಕ್ಷಣೆ ನೀಡಲಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.