ಯುವಕನ ಅಪಹರಣ, ಹಲ್ಲೆ ಆರೋಪ: ನಟ ದುನಿಯಾ ವಿಜಯ್ ಪೊಲೀಸ್ ವಶ
ಬೆಂಗಳೂರು, ಸೆ.23: ಜಿಮ್ ತರಬೇತುದಾರ ಮಾರುತಿ ಗೌಡ ಎಂಬವರನ್ನು ಅಪಹರಿಸಿ, ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ನಟ ದುನಿಯಾ ವಿಜಯ್ ನನ್ನು ಹೈಗ್ರೌಂಡ್ ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ರಾತ್ರಿ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಬಾಡಿ ಬಿಲ್ಡಿಂಗ್ ಸ್ಪರ್ಧೆ ನೋಡಲು ಬಂದಿದ್ದ ನಟ ದುನಿಯಾ ವಿಜಯ್ ಈ ಹಲ್ಲೆ ನಡೆಸಿದ್ದಾನೆ ಎಂದು ದೂರಲಾಗಿದೆ. ಜಿಮ್ ತರಬೇತುದಾರ ಪಾನಿಪುರಿ ಕಿಟ್ಟಿ ಜೊತೆಗೆ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಆತನ ಸಂಬಂಧಿ ಮಾರುತಿ ಗೌಡನನ್ನು ಅಪಹರಿಸಿ, ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ.
ಹಲ್ಲೆಗೊಳಗಾದ ಮಾರುತಿಯನ್ನು ಅಪಹರಿಸಿರುವ ಬಗ್ಗೆ ದುನಿಯಾ ವಿಜಯ್ ವಿರುದ್ಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪಾನಿಪುರಿ ಕಿಟ್ಟಿ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ 11.30ರ ಸುಮಾರಿಗೆ ದುನಿಯಾ ವಿಜಯ್ನನ್ನು ಸಂಪರ್ಕ ಮಾಡಿದ್ದ ಹೈಗ್ರೌಂಡ್ ಪೊಲೀಸರ ಆದೇಶದ ಮೇರೆಗೆ ಮಾರುತಿ ಗೌಡನ ಜೊತೆಗೆ ಅರ್ಧ ಗಂಟೆಯೊಳಗೆ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ದುನಿಯಾ ವಿಜಯ್ಗೆ ಎಸಿಪಿ ರವಿಶಂಕರ್ ಎಚ್ಚರಿಕೆ ನೀಡಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಅಪಹರಣ, ಹಲ್ಲೆ, ಕೊಲೆ ಬೆದರಿಕೆ ಆರೋಪದಡಿ ದುನಿಯಾ ವಿಜಯ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.