ಪರಿಷತ್ ಉಪ ಚುನಾವಣೆ: ಮೂವರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧಾರ
ಬೆಂಗಳೂರು, ಸೆ. 23: ವಿಧಾನಸಭೆಯಿಂದ ವಿಧಾನ ಪರಿಷತ್ಗೆ ನಡೆಯಲಿರುವ ಉಪ ಚುನಾವಣೆಯಲ್ಲಿ ಮೂರು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ವಿಪಕ್ಷ ಬಿಜೆಪಿ ತೀರ್ಮಾನಿಸಿದೆ.
ಅ.3ಕ್ಕೆ ನಡೆಯಲಿರುವ ಮೇಲ್ಮನೆಯ 3 ಸ್ಥಾನಗಳ ಚುನಾವಣೆಗೆ ಬಿಜೆಪಿಯು ಮಾಜಿ ಸದಸ್ಯರಾದ ಬಿ.ಜೆ.ಪುಟ್ಟಸ್ವಾಮಿ, ಡಿ.ಎಸ್.ವೀರಯ್ಯ, ಭಾರತಿಶೆಟ್ಟಿ, ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಹಾಗೂ ಎಸ್ಸಿ ಮೋರ್ಚಾ ಮುಖಂಡ ಚಿ.ನಾ.ರಾಮು ಸೇರಿದಂತೆ ನಾಲ್ಕೈದು ಮಂದಿ ಆಕಾಂಕ್ಷಿಗಳಿದ್ದು, ಮೂವರನ್ನು ಕಣಕ್ಕಿಳಿಸಲಿದೆ ಎಂದು ಗೊತ್ತಾಗಿದೆ.
ಡಾ.ಜಿ.ಪರಮೇಶ್ವರ್, ಕೆ.ಎಸ್.ಈಶ್ವರಪ್ಪ ಮತ್ತು ವಿ.ಸೋಮಣ್ಣ ಅವರು ಶಾಸಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ತೆರವಾಗಿದ್ದ ಮೂರು ಸ್ಥಾನಗಳಿಗೆ ಉಪ ಚುನಾವಣೆ ಅಕ್ಟೋಬರ್ 3ಕ್ಕೆ ಮತದಾನ ನಡೆಯಲಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿನ ಆಂತರಿಕ ಭಿನ್ನಮತದ ಲಾಭ ಪಡೆದುಕೊಳ್ಳಲು ಬಿಜೆಪಿ ತಂತ್ರ ರೂಪಿಸಿದೆ ಎನ್ನಲಾಗಿದೆ.
ಕಾಂಗ್ರೆಸಿನ 80 ಹಾಗೂ ಜೆಡಿಎಸ್ನ 37 ಮಂದಿ ಶಾಸಕರು ಸೇರಿ ಮೈತ್ರಿ ಸರಕಾರಕ್ಕೆ 117 ಸಂಖ್ಯಾಬಲವಿದ್ದು, ಚುನಾವಣೆಯಲ್ಲಿಯೂ ಉಭಯ ಪಕ್ಷಗಳ ಮೈತ್ರಿ ಹಿನ್ನೆಲೆಯಲ್ಲಿ ಮೂರು ಸ್ಥಾನಗಳನ್ನು ಅನಾಯಾಸವಾಗಿ ಗೆಲ್ಲಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ವಿಪಕ್ಷ ಬಿಜೆಪಿ 104 ಮಂದಿ ಸದಸ್ಯ ಬಲವಿದ್ದು, ಚುನಾವಣೆಯಲ್ಲಿ ಗೆಲ್ಲುವುದು ಕಷ್ಟಸಾಧ್ಯ ಎಂದೇ ವಿಶ್ಲೇಷಿಸಲಾಗುತ್ತಿದೆ. ಪರಿಷತ್ ಚುನಾವಣೆಯಲ್ಲಿ ರಹಸ್ಯವಾಗಿ ಮತದಾನ ನಡೆಯುವುದರಿಂದ ಭಿನ್ನಮತದ ಲಾಭ ತನಗೆ ವರವಾಗಬಹುದೆಂಬ ನಿರೀಕ್ಷೆಯಲ್ಲಿ ಬಿಜೆಪಿ ಇದೆ ಎನ್ನಲಾಗಿದೆ.