ಕೊಲೆ ಸುದ್ದಿ ಮುಚ್ಚಿಡಲು ಪತ್ನಿಯ ಹತ್ಯೆ: ಆರೋಪಿ ಬಂಧನ
ಬೆಂಗಳೂರು, ಸೆ.26: ಜಮೀನು ಮಾಲಕನೊಬ್ಬನನ್ನು ಕೊಲೆಗೈದಿದ್ದ ಸುದ್ದಿಯನ್ನು ಬಚ್ಚಿಡಲು ತನ್ನ ಪತ್ನಿಯನ್ನೇ ಕೊಲೆಗೈದಿದ್ದ ಆರೋಪದಡಿ ವ್ಯಕ್ತಿಯೊಬ್ಬನನ್ನು ಆಲವಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ವೆಂಕಟಸ್ವಾಮಿ ಎಂಬಾತ ಬಂಧಿತ ಆರೋಪಿಯಾಗಿದ್ದು, ಈತ ಸೆ.18 ರಂದು ತನ್ನ ಪತ್ನಿಯನ್ನು ಸೀಮೆಎಣ್ಣೆ ಸುರಿದು ಹತ್ಯೆಗೈದಿದ್ದ. ನಂತರ ಅಸ್ವಾಭಾವಿಕ ಸಾವು ಎಂದು ಬಿಂಬಿಸಿದ್ದ ಎಂದು ಹೇಳಲಾಗಿದೆ.
ಈ ಪ್ರಕರಣ ಸಂಬಂಧ ಅನುಮಾನಗೊಂಡು ವೆಂಕಟಸ್ವಾಮಿಯನ್ನು ವಿಚಾರಣೆಗೊಳಪಡಿಸಿದಾಗ, ವೆಂಕಟಸ್ವಾಮಿ ವಾಸವಿರುವ ಜಮೀನಿನ ಮಾಲಕ ಕೃಷ್ಣಪ್ಪನನ್ನು ಆರೋಪಿಗಳು ಕೊಲೆ ಮಾಡಿದ್ದರು. ನಂತರ ಮೃತ ದೇಹದ ಅಸ್ಥಿಯನ್ನ ಬಿಡಲು ಶ್ರೀರಂಗಪಟ್ಟಣಕ್ಕೆ ವೆಂಕಟಸ್ವಾಮಿ ತೆರಳಿದ್ದ ಎನ್ನಲಾಗಿದೆ.
ಈ ಬಗ್ಗೆ ನೀವು ಏಕೆ ಹೋಗಿದ್ದೀರಿ ಎಂದು ಪತ್ನಿ ಸುಧಾರಾಣಿ ಪತಿ ವೆಂಕಟಸ್ವಾಮಿಯನ್ನು ಪ್ರಶ್ನಿಸಿದ್ದಳು. ಆ ವೇಳೆ ವೆಂಕಟಸ್ವಾಮಿ ಜಮೀನನ್ನ ಕಬಳಿಸುವ ವಿಚಾರಕ್ಕಾಗಿ ಹೀಗೆ ಮಾಡಿದೆ ಎಂದಿದ್ದ, ನಂತರ ಈ ವಿಷಯ ತನ್ನ ಪತ್ನಿಯಿಂದ ಬೆಳಕಿಗೆ ಬರಬಹುದು ಎಂದು ಪತ್ನಿಯ ಕೊಲೆ ಮಾಡಿದ್ದ ಎಂದು ತಿಳಿದುಬಂದಿದೆ.
ಜಮೀನು ಮಾಲಕನ ಕೊಲೆ ಸಂಬಂಧ ವೈದ್ಯ ಸೇರಿದಂತೆ 8 ಜನ ಆರೋಪಿಗಳನ್ನ ಆಲವಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.