ಆಧಾರ್ ನಮ್ಮದೆಂದು ಬಿಜೆಪಿಯವರು ಕುಣಿಯುವುದು ಬೇಡ: ದಿನೇಶ್ ಗುಂಡೂರಾವ್
"ತೀರ್ಪು ಪೂರ್ಣ ಪರಿಶೀಲನೆ ಬಳಿಕ ಭಡ್ತಿ ಮೀಸಲಾತಿ ಬಗ್ಗೆ ತೀರ್ಮಾನ"
ಬೆಂಗಳೂರು, ಸೆ. 26: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಅಧಿಕಾರಿಗಳು ಮತ್ತು ನೌಕರರ ಭಡ್ತಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶವನ್ನು ಸಂಪೂರ್ಣವಾಗಿ ಇನ್ನೂ ನೋಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 2016ರ ನಾಗರಾಜು ಪಿಟಿಷನ್ ಬಗ್ಗೆ ಅಷ್ಟೇ ಹೇಳಿದೆ. ಭಡ್ತಿ ಪ್ರಮುಖವಾದ ವಿಚಾರವಾಗಿದೆ. ಹೀಗಾಗಿ ಕಾನೂನು ತಜ್ಞರ ಸಲಹೆ ಪಡೆಯಬೇಕು. ಮೀಸಲಾತಿಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಏನೂ ಹೇಳಿಲ್ಲ ಎಂದರು.
ಭಡ್ತಿ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ರಾಜ್ಯ ಸರಕಾರಗಳ ವಿವೇಚನೆಗೆ ಬಿಟ್ಟಿದೆ. ಹೀಗಾಗಿ ಇದು ರಾಜ್ಯ ಸರಕಾರದ ಪರವಾಗಿದೆ. ಇದೊಂದು ಅತ್ಯಂತ ಸೂಕ್ಷ್ಮ ವಿಚಾರ. ಕೋರ್ಟಿನ ಸಂಪೂರ್ಣ ವರದಿ ನೋಡಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
‘ಸುಪ್ರೀಂ ಕೋರ್ಟ್ ಆಧಾರ್ ದುರ್ಬಳಕೆ ಬೇಡ, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸೂಚಿಸಿದೆ. ಆಧಾರ್ ಯುಪಿಎ ಸರಕಾರದ ಪ್ರಮುಖ ಯೋಜನೆ. ಬಿಜೆಪಿಯವರು ಅದನ್ನು ನಮ್ಮದೆಂದು ಕುಣಿಯುವುದು ಬೇಡ. ಎಲ್ಲ ಇಲಾಖೆಗೆ ಆಧಾರ ಅಳವಡಿಕೆ ಬೇಡವೆಂದು ಹೇಳಿದೆ. ಹೀಗಾಗಿ ಸರಕಾರ ಸರಿಯಾಗಿ ಬಳಸಿಕೊಳ್ಳಬೇಕಿದೆ’
-ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ