ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ನಿಶ್ಚಿತ: ದಿನೇಶ್ ಗುಂಡೂರಾವ್
ಬೆಂಗಳೂರು, ಸೆ.27: ಕಾಂಗ್ರೆಸ್ ಪಕ್ಷದಲ್ಲಿ ಮೇಯರ್ ಅಭ್ಯರ್ಥಿ ಆಯ್ಕೆ ಸಂಬಂಧ ಯಾವುದೇ ಗೊಂದಲ, ಸಮಸ್ಯೆಗಳು ಇಲ್ಲ. ಎಲ್ಲ ಮುಖಂಡರು ಒಗ್ಗಟ್ಟಾಗಿದ್ದಾರೆ. ಬಿಬಿಎಂಪಿಯಲ್ಲಿ ಸತತ ನಾಲ್ಕನೇ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿ ಮೇಯರ್ ಹಾಗೂ ಜೆಡಿಎಸ್ ಅಭ್ಯರ್ಥಿ ಉಪಮೇಯರ್ ಆಗಿ ಆಯ್ಕೆಯಾಗುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದರು.
ಗುರುವಾರ ನಗರದ ಖಾಸಗಿ ಹೊಟೇಲ್ನಲ್ಲಿ ಬಿಬಿಎಂಪಿ ಪಕ್ಷೇತರ ಸದಸ್ಯರು, ಕಾಂಗ್ರೆಸ್ ಶಾಸಕರೊಂದಿಗೆ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕಾಗಿ ನೀರಿನಿಂದ ಹೊರಗೆ ಹಾಕಿದ ಮೀನಿನಂತೆ ಚಡಪಡಿಸುತ್ತಿರುವ ಬಿಜೆಪಿಯವರು, ಇನ್ನೂ ತಮ್ಮ ಹಳೆಯ ಚಾಳಿಯನ್ನು ಬಿಟ್ಟಿಲ್ಲ ಎಂದು ಟೀಕಿಸಿದರು.
ರಾಜ್ಯ ಸರಕಾರವನ್ನು ಪತನಗೊಳಿಸಲು ಎಲ್ಲ ಬಗೆಯ ಅನೈತಿಕ, ನೀತಿಗೆಟ್ಟ ರಾಜಕಾರಣವನ್ನು ಮಾಡಿದ್ದ ಬಿಜೆಪಿ, ಬಿಬಿಎಂಪಿಯ ಮೇಯರ್ ಚುನಾವಣೆಯಲ್ಲಿಯೂ ಅದನ್ನೆ ಮುಂದುವರೆಸಿದೆ. ಕಳೆದ ಮೂರು ವರ್ಷಗಳಿಂದ 7 ಮಂದಿ ಪಕ್ಷೇತರ ಸದಸ್ಯರು ನಮ್ಮ ಜೊತೆ ಇದ್ದಾರೆ. ಈ ಪೈಕಿ ಆನಂದ್ ಹಾಗೂ ರಮೇಶ್ ಎಂಬವರನ್ನು ಬಿಜೆಪಿಯವರು ಎಳೆದುಕೊಂಡು ಹೋಗಿದ್ದಾರೆ ಎಂದು ದಿನೇಶ್ಗುಂಡೂರಾವ್ ದೂರಿದರು.
ಪಕ್ಷೇತರ ಸದಸ್ಯರನ್ನು ತಮ್ಮತ್ತ ಸೆಳೆದುಕೊಳ್ಳಲು ಆಪರೇಷನ್ ಕಮಲ, ಬೇರೆ ಬೇರೆ ರೀತಿಯ ಆಮಿಷಗಳನ್ನು ಒಡ್ಡುವ ಪ್ರಯತ್ನವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ಒಡಕಿದೆ, ಭಿನ್ನಮತವಿದೆ ಎಂದು ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ. ಅಧಿಕಾರಕ್ಕಾಗಿ ಬಿಜೆಪಿಯವರು ಇಷ್ಟು ತಳಮಟ್ಟದ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರು ಕರೆದುಕೊಂಡು ಹೋಗಿರುವ ಇಬ್ಬರು ಪಕ್ಷೇತರ ಸದಸ್ಯರು ಸಂಜೆ ವೇಳೆಗೆ ನಮ್ಮ ಜೊತೆ ವಾಪಸ್ ಬರಲಿದ್ದು, ಮೇಯರ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರೆ. ಪಕ್ಷೇತರ ಸದಸ್ಯರಿಗೆ ಕರೆಗಳನ್ನು ಮಾಡಿ ಕಿರುಕುಳ, ಒತ್ತಡ, ಹಿಂಸೆ ನೀಡಲಾಗುತ್ತಿದೆ. ಒಂದು ರೀತಿಯಲ್ಲಿ ಅವರನ್ನು ಅಪಹರಣ ಮಾಡಿದಂತಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು. ಬಿಜೆಪಿಯವರು ಈ ರೀತಿಯ ಕೀಳುಮಟ್ಟದ ರಾಜಕಾರಣ ಮಾಡುವುದು ಬಿಟ್ಟುಬಿಡಲಿ, ಅವರು ಏನೆ ಮಾಡಿದರೂ ಮೇಯರ್ ಹಾಗೂ ಉಪ ಮೇಯರ್ ಪಟ್ಟವನ್ನು ಅಲಂಕರಿಸಲು ಸಾಧ್ಯವಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು. ರಾಜ್ಯ ಸರಕಾರವನ್ನು ಪತನಗೊಳಿಸಲು ಬಿಜೆಪಿ ಮುಖಂಡರು ಮಾಡಿರುವ ಕೃತ್ಯಗಳನ್ನು ಜನ ನೋಡಿದ್ದಾರೆ. ನಿಮ್ಮ ಪ್ರಯತ್ನದಲ್ಲಿ ಈಗಾಗಲೆ ವಿಫಲವಾಗಿದ್ದೀರಾ. ಮೇಯರ್ ಚುನಾವಣೆಯಲ್ಲೂ ನೀವು ವಿಫಲವಾಗುತ್ತೀರಾ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಬಿಜೆಪಿ ಮುಖಂಡರಾದ ಆರ್.ಅಶೋಕ್, ಅಶ್ವಥ್ನಾರಾಯಣ್, ಸತೀಶ್ರೆಡ್ಡಿ ಸೇರಿದಂತೆ ಇನ್ನಿತರ ಶಾಸಕರು ಬೆಂಗಳೂರಿನ ಅಭಿವೃದ್ಧಿಗಾಗಿ ಕೇಂದ್ರ ಸರಕಾರದ ಬಳಿ ಹೋಗಿ ಅನುದಾನ ಕೊಡಿಸುವ ಕೆಲಸ ಮಾಡಲಿ, ನಿಮ್ಮ ಸಂಸದರಿಂದ ನೆರವು ಕೊಡಿಸಲು ಮುಂದಾಗಲಿ ಎಂದು ಅವರು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಮೇಯರ್ ಅಭ್ಯರ್ಥಿ ಆಯ್ಕೆಗೆ ಯಾವಾಗಲೂ ಪೈಪೋಟಿ ಇದ್ದೇ ಇರುತ್ತದೆ. ನಗರ ಪಾಲಿಕೆಯ ಸದಸ್ಯರ ಅಭಿಪ್ರಾಯ ಪಡೆದ ನಂತರ ಅಂತಿಮವಾಗಿ ಮೇಯರ್ ಅಭ್ಯರ್ಥಿ ಹೆಸರನ್ನು ಪ್ರಕಟಿಸಲಾಗುವುದು. ಲಾವಣ್ಯಗಣೇಶ್ರೆಡ್ಡಿ, ಸೌಮ್ಯಾ ಶಿವಕುಮಾರ್ ಹಾಗೂ ಗಂಗಾಂಬಿಕೆ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ವಿಧಾನಪರಿಷತ್ ಸದಸ್ಯ ರಘು ಆಚಾರ್ ವಿದೇಶ ಪ್ರವಾಸಕ್ಕೆ ತೆರಳುತ್ತಿಲ್ಲ. ಬೆಂಗಳೂರಿನಲ್ಲೆ ಇದ್ದು, ನಾಳೆ ನಡೆಯುವ ಮೇಯರ್ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ. ಮಾಜಿ ಸಚಿವ ರೋಷನ್ಬೇಗ್ ಸೌದಿ ಅರೇಬಿಯಾದಿಂದ ನಾಳೆ ಬೆಳಗ್ಗೆ ಹಿಂದಿರುಗಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಎಸ್.ಟಿ.ಸೋಮಶೇಖರ್, ಎನ್.ಎ.ಹಾರೀಸ್, ಮುನಿರತ್ನ, ಬಿ.ಎ.ಬಸವರಾಜ, ಮೇಯರ್ ಕೆ.ಸಂಪತ್ರಾಜ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.