ತನ್ನ ಸಿಬ್ಬಂದಿಗೆ ಔತಣಕೂಟ ಏರ್ಪಡಿಸಿದ ಮೇಯರ್ ಸಂಪತ್ರಾಜ್
ಕಾರಿನಲ್ಲಿ ತಾನೇ ಕರೆದುಕೊಂಡುಹೋಗಿ ಊಟ
ಬೆಂಗಳೂರು, ಸೆ.27: ಬಿಬಿಎಂಪಿ ಮೇಯರ್ ಆರ್.ಸಂಪತ್ರಾಜ್ ತಮ್ಮ ಕಾರು ಚಾಲಕ, ಅಂಗರಕ್ಷಕ, ದಫೇದಾರ್ ಸೇರಿದಂತೆ ಹಲವು ಸಿಬ್ಬಂದಿಯನ್ನು ತಮ್ಮ ಕಾರಿನಲ್ಲಿ ಕರೆದೊಯ್ದು ಔತಣಕೂಟ ನೀಡಿದ್ದಾರೆ.
ಬುಧವಾರ ತಾವೇ ಸ್ವತಃ ಕಾರು ಚಲಾಯಿಸುವ ಮೂಲಕ ಸಿಬ್ಬಂದಿಯನ್ನು ನಗರದ ಖಾಸಗಿ ಹೊಟೇಲ್ಗೆ ಕರೆದೊಯ್ದು ಭರ್ಜರಿ ಔತಣಕೂಟ ನೀಡಿದರು. ಕಳೆದ ಒಂದು ವರ್ಷದಿಂದ ಮೇಯರ್ ಆಗಿದ್ದ ಸಂಪತ್ರಾಜ್ ಸೆ.28 ಕ್ಕೆ ಹುದ್ದೆಯಿಂದ ನಿರ್ಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಸಿಬ್ಬಂದಿಗೆ ಔತಣಕೂಟ ಏರ್ಪಡಿಸಿದ್ದರು.
ಬೆಂಗಳೂರು ಮಹಾನಗರ ಪಾಲಿಕೆಯ 51ನೇ ಮೇಯರ್ ಆಗಿ 2017, ಸೆ.28 ರಂದು ಆಯ್ಕೆಯಾಗಿದ್ದ ಸಂಪತ್ರಾಜ್ ಸೆ.28 ಕ್ಕೆ ತಮ್ಮ ಅಧಿಕಾರ ಅವಧಿ ಮುಕ್ತಾಯಗೊಂಡು, ನೂತನ ಮೇಯರ್ಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ. ಈ ವೇಳೆ ಬೆಳ್ಳಿ ಕೀ, ಬ್ಯಾಟನ್ ನೀಡುವ ಸಂಪ್ರದಾಯಕ್ಕೆ ನಾಂದಿ ಹಾಡಿದ ಸಂಪತ್ರಾಜ್ ತಮ್ಮ ಸಿಬ್ಬಂದಿಯೊಂದಿಗೆ ಕೃತಜ್ಞತಾಪೂರ್ವಕವಾಗಿ ನಡೆದುಕೊಂಡಿದ್ದಾರೆ.
Next Story