ತಮಿಳುನಾಡಿನ ಮುರುಗನ್ ದೇವಸ್ಥಾನಕ್ಕೆ ಮುಖ್ಯಮತ್ರಿ ಕುಮಾರಸ್ವಾಮಿ ಭೇಟಿ
ಬೆಂಗಳೂರು, ಸೆ. 27: ಮುಖ್ಯಮಂತ್ರಿ ಕುಮಾರಸ್ವಾಮಿ ದೇವಸ್ಥಾನ ಯಾತ್ರೆ ಮುಂದುವರಿಸಿದ್ದು, ಇಂದು ತಮಿಳುನಾಡಿನ ತಿರುಚೆಂದೂರಿನ ಮುರುಗನ್ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿತಿನ್ ಜತೆ ವಿಮಾನದ ಮೂಲಕ ತೆರಳಿದ ಕುಮಾರಸ್ವಾಮಿ, ಮುರುಗನ್ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಇತ್ತೀಚೆಗಷ್ಟೇ ಮಾಜಿ ಪ್ರಧಾನಿ ದೇವೇಗೌಡ, ಸಚಿವ ಎಚ್.ಡಿ.ರೇವಣ್ಣ ಅವರೊಂದಿಗೆ ಶೃಂಗೇರಿಗೆ ಭೇಟಿ ನೀಡಿದ್ದ ಕುಮಾರಸ್ವಾಮಿ ಶಾರದಾಂಬೆಗೆ ವಿಶೇಷ ಪೂಜೆ, ಹವನ-ಹೋಮ ನಡೆಸಿದ್ದರು.
ಸರಕಾರ ಸ್ಥಿರ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಐದು ವರ್ಷ ಅವಧಿ ಪೂರ್ಣಗೊಳಿಸುತ್ತದೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಅಲ್ಲದೆ, ಯಾವುದೇ ಭಿನ್ನ ಚಟುವಟಿಕೆಗಳು ಇಲ್ಲ. ಆದರೆ, ಈ ಬಗ್ಗೆ ಬಿಜೆಪಿ ವದಂತಿಗಳನ್ನು ಹಬ್ಬಿಸುತ್ತಿದೆ. ನಮ್ಮ ಸರಕಾರ ಸ್ಥಿರವಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ದೇವಳಕ್ಕೆ ಹೋಗೋದು ಅವರಿಗೆ ಚಟ: ದೇವಸ್ಥಾನಕ್ಕೆ ಹೋಗೋದು ತಪ್ಪಲ್ಲ. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ದೇವಸ್ಥಾನಕ್ಕೆ ಹೋಗೋದನ್ನೇ ಚಟ ಮಾಡಿಕೊಂಡಿದ್ದಾರೆ. ಮಂಡ್ಯದಲ್ಲಿ 20 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೂ ಇವರು ದೇವಸ್ಥಾನ ಸುತ್ತುತ್ತಿದ್ದಾರೆಂದು ಬಿಜೆಪಿ ಮುಖಂಡ ಆರ್.ಅಶೋಕ್ ಟೀಕಿಸಿದರು.