ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ರಾಜ್ಯ ಸರಕಾರ ಚಿಂತನೆ
ಬೆಂಗಳೂರು, ಅ.1: ರೈತರಿಗೆ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಾಗುತ್ತಿರುವ ಅನ್ಯಾಯವನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕೃಷಿ ಉತ್ಪನ್ನ ಮಾರುಟಕ್ಟೆ(ಎಪಿಎಂಸಿ) ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ.
2018-19 ನೆ ಸಾಲಿಗೆ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ್ದರಿಂದ ವರ್ತಕರು ಎಪಿಎಂಸಿ ನೀಡುವ ದರಕ್ಕಿಂತ ಕಡಿಮೆ ದರದಲ್ಲಿ ರೈತರಿಂದ ಉತ್ಪನ್ನ ಖರೀದಿ ಮಾಡುತ್ತಿರುವುದು ಸರಕಾರಕ್ಕೆ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ರೈತರನ್ನು ವಂಚಿಸುವವರಿಗೆ 1 ವರ್ಷ ಜೈಲು ಮತ್ತು 50 ಸಾವಿರ ದಂಡ ವಿಧಿಸಲಾಗುತ್ತದೆ. ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ರೈತರ ಉತ್ಪನ್ನ ಖರೀದಿಸುವ ವರ್ತಕರ ವಿರುದ್ಧ ಕ್ರಮಕ್ಕಾಗಿ ಈಗಿರುವ ಕಾಯ್ದೆಯಲ್ಲಿ ಅವಕಾಶವಿಲ್ಲ. ಅಲ್ಲದೆ, ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ನಾಯಕರು ಹಾಗೂ ಅವರ ಬೆಂಬಲಿಗರೇ ಇದ್ದಾರೆ. ಅವರ ವಿರುದ್ಧ ಈ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಲು ಕಷ್ಟ. ಹೀಗಾಗಿ, ಎಪಿಎಂಸಿ ಕಾಯ್ದೆಗೆ ತಿದ್ಧುಪಡಿ ತಂದು ವರ್ತಕರಿಗೆ ಕಡಿವಾಣ ಹಾಕಲು ಸರಕಾರ ಮುಂದಾಗಿದೆ.
ರಾಜ್ಯದಲ್ಲಿ 180 ಎಪಿಎಂಸಿಗಳಿದ್ದು, ಅನೇಕ ಕಡೆ ಈಗಾಗಲೇ ಆನ್ಲೈನ್ ಮಾರ್ಕೆಟಿಂಗ್ ವ್ಯವಸ್ಥೆ ಜಾರಿ ಮಾಡಲಾಗಿದೆ. ಆದರೂ, ವರ್ತಕರು ರೈತರನ್ನು ವಂಚಿಸುವ ಪ್ರವೃತ್ತಿ ಕೊನೆಯಾಗಿಲ್ಲ.
ಸುಧಾರಣೆಗಳಿಗೆ ಸಲಹೆ: ಕಾಯ್ದೆ ತರುವ ಜತೆಗೆ ಮಾರುಕಟ್ಟೆ ವ್ಯವಸ್ಥೆ ಬಲವರ್ಧನೆ, ಮಾರುಕಟ್ಟೆಯಲ್ಲಿ ಬೆಲೆ ಕುಸಿದಾಗ ರೈತರು ಉತ್ಪನ್ನ ಶೇಖರಿಸಲು ವ್ಯವಸ್ಥೆ, ಕೆಲವೇ ಕೆಲವು ಬೆಳೆ ಬೆಳೆಯುವುದರಿಂದ ಆಗುವ ಹಾನಿ ಕುರಿತು ರೈತರಿಗೆ ಮಾರ್ಗದರ್ಶನ, ವರ್ತಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಸೇರಿ ಹಲವು ಸುಧಾರಣೆಗಳನ್ನು ತರಲು ಸಹ ಬೆಲೆ ಆಯೋಗವು ಸರಕಾರಕ್ಕೆ ಸಲಹೆ ನೀಡಲಿದೆ.
2015ರಲ್ಲಿಯೇ ಪ್ರಸ್ತಾವನೆ: ಮಾರುಕಟ್ಟೆಯಲ್ಲಿ ರೈತರಿಗೆ ಆಗುತ್ತಿರುವ ವಂಚನೆ ಹಾಗೂ ಕನಿಷ್ಠ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ರೈತರ ಉತ್ಪನ್ನ ಖರೀದಿಸುವವರ ವಿರುದ್ಧ ಕಾಯ್ದೆ ಜಾರಿಗೆ ತರಬೇಕೆಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಪ್ರಕಾಶ್ ಕಮ್ಮರಡಿ 2015ರಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈಗ ಅದನ್ನು ಜಾರಿ ಮಾಡಲು ಸರಕಾರ ಮನಸ್ಸು ಮಾಡಿದೆ.
ಶೇ.15 ಕಮಿಷನ್: ಕೇಂದ್ರ ಸರಕಾರ ಕನಿಷ್ಠ ಬೆಂಬಲ ಬೆಲೆ ಏರಿಕೆ ಜತೆಗೆ ಈ ಬೆಲೆಗೆ ರೈತರ ಉತ್ಪನ್ನ ಖರೀದಿಸುವ ವರ್ತಕರಿಗೆ ಶೇ.15 ಕಮಿಷನ್ ನೀಡಲಿದೆ. ಎಷ್ಟು ಬೇಕಾದರೂ ದಾಸ್ತಾನು ಅವಕಾಶ, ರಫ್ತು ಅನುಮತಿ ಸೇರಿ ಹಲವು ಪ್ರೋತ್ಸಾಹದಾಯಕ ಕಾರ್ಯಕ್ರಮ ಜಾರಿ ಮಾಡಿದೆ.