ನೂತನ ಮರಳು ನೀತಿ ಜಾರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಿಂತನೆ
ಬೆಂಗಳೂರು,ಅ.9 : ರಾಜ್ಯಾದ್ಯಂತ ಮರಳು ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಾಗೂ ಎಲ್ಲರಿಗೂ ಸರಳ ದರದಲ್ಲಿ ಮರಳು ಸಿಗುವ ಸಲುವಾಗಿ ಹೊಸ ಮರಳು ನೀತಿ ತರಲು ಮುಖ್ಯಮಂತ್ರಿ ಕುಮಾರಸ್ವಾಮಿ ಮುಂದಾಗಿದ್ದಾರೆ.
ರಾಜ್ಯದಲ್ಲಿ ಅಕ್ರಮ ಮರಳುಗಾರಿಕೆ, ಫಿಲ್ಟರ್ ಮರಳು, ಮರಳು ಕೊರತೆ ಎದುರಾಗಿದೆ. ಅಲ್ಲದೆ, ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುವವರು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ, ಇದಕ್ಕೆಲ್ಲಾ ಪರಿಹಾರ ಕಂಡುಕೊಳ್ಳುವಲ್ಲಿ ಹಿಂದಿನ ಸರಕಾರಗಳು ವಿಫಲವಾಗಿವೆ. ಹೀಗಾಗಿ, ಮುಖ್ಯಮಂತ್ರಿ ದಿಟ್ಟ ಕ್ರಮಕ್ಕೆ ಮುಂದಾಗಿದ್ದಾರೆ.
ಅಧಿಕಾರ ನಡೆಸಿದವರ ಇಚ್ಛಾ ಶಕ್ತಿಯ ಕೊರತೆ ಒಂದು ಕಡೆಯಾದರೆ, ಮತ್ತೊಂದು ಕಡೆ ಮರಳು ಮಾಫಿಯಾದ ಲಾಬಿ ಹೆಚ್ಚಾಗಿದೆ. ಇದರ ಪರಿಣಾಮದಿಂದಾಗಿ ರಾಜ್ಯದಲ್ಲಿ ಜನ ಸ್ನೇಹಿ ಮರಳು ನೀತಿ ಇಂದಿಗೂ ಮರೀಚಿಕೆಯಾಗಿಯೇ ಉಳಿದುಕೊಂಡಿದೆ. ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿ ಹೊಸ ಮರಳು ನೀತಿ ತರುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿರುವುದನ್ನು ಸಾರ್ವಜನಿಕರು ಮುಕ್ತ ಕಂಠದಿಂದ ಸ್ವಾಗತಿಸಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಕಾರ ಸದ್ಯ ರಾಜ್ಯದಲ್ಲಿ ಸುಮಾರು 30 ಎಂಎಂಟಿ (ಮಿಲಿಯನ್ ಮೆಟ್ರಿಕ್ ಟನ್) ಮರಳಿನ ಬೇಡಿಕೆ ಇದೆ. ಈ ಮರಳು ಬೇಡಿಕೆಯಲ್ಲಿ ಪ್ರಸ್ತುತ 3.5 ಎಂಎಂಟಿ ನದಿ ಮರಳು ಪೂರೈಕೆಯಾಗುತ್ತಿದೆ. ಇನ್ನು ಸುಮಾರು 22 ಎಂಎಂಟಿಯಷ್ಟು ಎಂ-ಸ್ಯಾಂಡ್ ಪೂರೈಕೆಯಾಗುತ್ತಿದೆ. ಅಂದರೆ ಸುಮಾರು 4.5 ಎಂಎಂಟಿ ಮರಳಿನ ಕೊರತೆ ಇದೆ ಎಂದು ಅಂದಾಜಿಸಲಾಗಿದೆ.
2017-18ನೇ ಸಾಲಿನಲ್ಲಿ 311ಮರಳು ಬ್ಲಾಕ್ಗಳನ್ನು ಹರಾಜು ಮಾಡಲಾಗಿದೆ. ಈ ಪೈಕಿ 161 ಗುತ್ತಿಗೆ ಮಂಜೂರು ಮಾಡಲಾಗಿದೆ. ಇದರಲ್ಲಿ ಪ್ರಸ್ತುತ 95 ಮರಳು ಬ್ಲಾಕ್ಗಳು ಕಾರ್ಯ ನಿರ್ವಹಿಸುತ್ತಿವೆ. ಇನ್ನು ಸರಕಾರಿ ಕಾಮಗಾರಿಗಳಿಗೆ 39 ಮರಳು ಬ್ಲಾಕ್ಗಳನ್ನು ಮೀಸಲಿಡಲಾಗಿದ್ದು,ಅದರಲ್ಲಿ 12 ಬ್ಲಾಕ್ಗಳು ಕಾರ್ಯ ನಿರ್ವಸುತ್ತಿದೆ.
ರಾಜ್ಯದಲ್ಲಿ ಸುಮಾರು 164 ಎಂ-ಸ್ಯಾಂಡ್ ಘಟಕಗಳು ಇವೆ. ಪಟ್ಟಾ ಜಮೀನಿನಲ್ಲಿ ಮರಳು ಗಣಿಗಾರಿಕೆಗೆ 15 ಕಡೆ ಪರವಾನಗಿ ನೀಡಲಾಗಿದೆ. ಇನ್ನು ಮರಳು ಆಮದು ಮಾಡಿಕೊಳ್ಳಲು ಒಟ್ಟು ಆರು ಸಂಸ್ಥೆಗಳಿಗೆ ಅನುಮತಿ ನೀಡಲಾಗಿದ್ದು, ಇಲ್ಲಿವರೆಗೆ 5 ಸಾವಿರ ಮೆಟ್ರಿಕ್ ಟನ್ ಮರಳು ಆಮದಾಗಿದೆ.
ಹೊಸ ಮರಳು ನೀತಿಗೆ ಚಿಂತನೆ: ಹೊಸ ಮರಳು ನೀತಿ ರೂಪಿಸಲು ಮುಂದಾಗಿರುವ ಕುಮಾರಸ್ವಾಮಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಲು ನಿರ್ಧರಿಸಿದ್ದು, ಮರಳುಗಾರಿಕೆ ಬಗ್ಗೆ ಅಧ್ಯಯನ ನಡೆಸಲು ತಜ್ಞರ ತಂಡ ಈಗಾಗಲೇ ಆಂಧ್ರ, ತೆಲಂಗಾಣ, ಗುಜರಾತ್ ಮತ್ತು ಮಹಾರಾಷ್ಟ್ರಕ್ಕೆ ತೆರಳಿದ್ದು, ಆ ವರದಿ ಆಧಾರದ ಮೇಲೆ ಮರಳು ನೀತಿಗೆ ಬದಲಾವಣೆ ತರಲು ಮುಂದಾಗಿದ್ದಾರೆ. ತಿಂಗಳಾಂತ್ಯಕ್ಕೆ ಈ ಸಂಬಂಧ ಅಧಿಕಾರಿಗಳ ಸಭೆ ನಡೆಸುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಮರಳು ಕೊರತೆ ನೀಗಿಸಲು ಸರಕಾರ ಹೆಚ್ಚಿನ ಪ್ರಮಾಣದಲ್ಲಿ ಎಂ-ಸ್ಯಾಂಡ್ ಉತ್ಪಾದಿಸಿ, ಪೂರೈಕೆ ಮಾಡಲು ನಿರ್ಧಾರ ಮಾಡಲಾಗಿದೆ. ಕರಾವಳಿ ನಿಯಂತ್ರಣ ವಲಯದಲ್ಲಿ ಸುಮಾರು 61 ಮರಳು ದಿಬ್ಬಗಳನ್ನು ತೆರವುಗೊಳಿಸಲು ಸುಮಾರು 390 ವ್ಯಕ್ತಿಗಳಿಗೆ ಸಾಂಪ್ರದಾಯಿಕ ಮರಳು ತೆಗೆಯುವ ಅನುಮತಿ ನೀಡಲಾಗಿದೆ. ಜತೆಗೆ ಹೆಚ್ಚಾಗಿ ಆಮದು ಮರಳಿನ ಹೆಚ್ಚಿನ ಬಳಕೆಗಾಗಿ ನಿಯಮದಲ್ಲೂ ತಿದ್ದುಪಡಿ ತರಲಾಗಿದೆ.