ಉಪಚುನಾವಣೆ ಹಿನ್ನೆಲೆ: ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಳ್ಳುವ ಸಾಧ್ಯತೆ
ಬೆಂಗಳೂರು, ಅ.9 : ಲೋಕಸಭೆ ಹಾಗೂ ವಿಧಾನಸಭೆ ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಿಕ್ಷಕರಿಗೆ ಪ್ರಸಕ್ತ ಸಾಲಿನ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ರಾಜ್ಯ ಸರಕಾರ ಈ ಹಿಂದೆ ವರ್ಗಾವಣೆ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿತ್ತಾದರೂ ಅನಿವಾರ್ಯ ಕಾರಣಗಳಿಂದ ಸ್ಥಗಿತಗೊಂಡಿತ್ತು. ಅನಂತರ ಅ.15 ರಿಂದ ಪ್ರಕ್ರಿಯೆ ಆರಂಭ ಮಾಡಬೇಕು ಎಂದು ಸಿದ್ಧತೆ ನಡೆಸಿತ್ತಾದರೂ, ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಅಡ್ಡಿಯಾಗಲಿದೆ.
ವರ್ಗಾವಣೆ ಪ್ರಕ್ರಿಯೆ ವಿಳಂಭವಾಗುತ್ತಿರುವುದಕ್ಕೆ ಪ್ರತಿಭಟನೆ ನಡೆಸಲು ಶಿಕ್ಷಕರು ನಿರ್ದರಿಸಿದ್ದಾರೆ. ಮತ್ತೊಂದು ಕಡೆ ಇಡೀ ವರ್ಗಾವಣೆ ಪ್ರಕ್ರಿಯೆ ನ.23 ರೊಳಗೆ ಮುಗಿಸಲು ಇಲಾಖೆ ಸಿದ್ಧತೆ ನಡೆಸಿದೆ.
2016 ರಲ್ಲಿ ಶಾಲಾ ಮಟ್ಟದ ವರ್ಗಾವಣೆ ನಡೆದಿತ್ತು, 2.02 ಲಕ್ಷ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಶಿಕ್ಷಕರಲ್ಲಿ ಸುಮಾರು 60 ಸಾವಿರ ಅಧಿಕಾರಿಗಳು ಹಾಗೂ ಶಿಕ್ಷಕರು ಪರಸ್ಪರ ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿದ್ದರು, ಇದಕ್ಕೆ 2 ಸಾವಿರ ಆಕ್ಷೇಪಣೆಗಳು ಬಂದಿದ್ದವು. ಇನ್ನು ಸರಕಾರಿ ಪದವಿ ಕಾಲೇಜಿನ ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆ ಮುಗಿದಿದ್ದು, ಕೆಲವು ವಾರಗಳ ಹಿಂದೆ ತಡೆ ಹಿಡಿಯಲಾಗಿದೆ, ಉಪನ್ಯಾಸಕರ ಜೊತೆ ಸಂಹವನ ಕೊರತೆಯಿಂದಾಗಿ ಈ ವರ್ಗಾವಣೆಗೂ ಬ್ರೇಕ್ ಬಿದ್ದಿದೆ.