ಕಣ್ಣಿನ ಸಮಸ್ಯೆ ಬಗ್ಗೆ ನಿರ್ಲಕ್ಷ ವಹಿಸಬೇಡಿ: ಡಾ.ಸುಜಾತ
ಬೆಂಗಳೂರು, ಅ. 13: ಕಣ್ಣಿನ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ವಹಿಸದೆ ಕಾಲ-ಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಕಣ್ಣುಗಳನ್ನು ಸಂರಕ್ಷಿಸಿಕೊಂಡು ಆರೋಗ್ಯವಂತರಾಗಿರಬೇಕು ಎಂದು ಮಿಂಟೋ ಕಣ್ಣಾಸ್ಪತ್ರೆಯ ಪ್ರಭಾರ ನಿರ್ದೇಶಕಿ ಡಾ.ಸುಜಾತ ರಾಥೋಡ್ ಕರೆ ನೀಡಿದ್ದಾರೆ.
ಶನಿವಾರ ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಮಿಂಟೋ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ವಿಶ್ವದೃಷ್ಟಿ ದಿನಾಚರಣೆಯ ಅಂಗವಾಗಿ ಸಂಘದ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೀಪಾವಳಿ ಹಬ್ಬ ಬಂದಾಗ ಮಾತ್ರ ಕಣ್ಣಿನ ಸುರಕ್ಷತೆ ಬಗ್ಗೆ ಜಾಗೃತಿ ವಹಿಸಲು ಪ್ರಾರಂಭಿಸುತ್ತೇವೆ. ಇದು ಉತ್ತಮ ಬೆಳವಣಿಗೆಯಲ್ಲ. ದಿನನಿತ್ಯ ಆರೋಗ್ಯ ತಪಾಸಣೆಯಂತೆ ಕಣ್ಣಿನ ತಪಾಸಣೆಯನ್ನು ಮಾಡಿಸುವ ದಿಕ್ಕಿನತ್ತ ಎಲ್ಲರೂ ಆಲೋಚನೆ ನಡೆಸಬೇಕು ಎಂದು ಹೇಳಿದರು.
ಕಣ್ಣಿನ ದಾನದ ಬಗ್ಗೆ ಊಹಾಪೋಹಗಳಿಗೆ ಕಿವಿಗೊಡದೆ ಮರಣದ ನಂತರ ಕಣ್ಣುಗಳನ್ನು ದಾನ ಮಾಡುವ ಮೂಲಕ ಇತರರಿಗೆ ಬೆಳಕಾಗಬೇಕೆಂದ ಅವರು, ಕಣ್ಣಿನ ಸುರಕ್ಷತೆಯ ಬಗ್ಗೆ ಎಲ್ಲರೂ ಅಗತ್ಯ ಜಾಗೃತಿ ವಹಿಸಬೇಕು ಎಂದು ಸೂಚಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರು ಯಾವಾಗಲೂ ಕ್ಲಿಷ್ಟಕರ ಸನ್ನಿವೇಶದಲ್ಲಿ ಹಾಗೂ ಒತ್ತಡದಿಂದ ಕಾರ್ಯ ನಿರ್ವಹಿಸುವ ಬಹುತೇಕ ಸಂದರ್ಭಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸದ ಪರಿಣಾಮ ಅನೇಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿರುವುದು ಸಾಮಾನ್ಯ ಎಂದರು.
ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸೋಮಶೇಖರ್ ಮಾತನಾಡಿ, ಡಾ.ರಾಜ್ಕುಮಾರ್ ಅವರು ನೇತ್ರ ದಾನದ ಪಾವಿತ್ರ್ಯತೆಯ ಬಗ್ಗೆ ಆಡಿದ ಮಾತುಗಳು ಅನೇಕರನ್ನು ಆಕರ್ಷಿಸಿತು. ಇದರಿಂದ ನೇತ್ರದಾನದ ಬಗ್ಗೆ ಜಾಗೃತಿ ಮೂಡಿ ನಾನು ಪ್ರೇರೇಪಿತನಾಗಿ ನೇತ್ರ ದಾನಕ್ಕೆ ನೋಂದಾಯಿಸಿದ್ದೇನೆ ಎಂದರು.
ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಆರ್.ರವೀಶ್, ರಾಷ್ಟ್ರೀಯ ನೇತ್ರ ಸಂಘದ ಅಧ್ಯಕ್ಷ ಎಂ.ವೆಂಕಟೇಶ್, ಕಾರ್ಯದರ್ಶಿ ಕೆ.ಆರ್.ದೇವರಾಜ್, ಉಪಾಧ್ಯಕ್ಷರಾದ ಎ.ಜಯಕುಮಾರ್, ಕೆ.ಸಿ.ವೇದಮೂರ್ತಿ. ಕಾರ್ಯದರ್ಶಿ ಎನ್.ಪಿ.ಮುನಿರಾಜು, ನರೇಂದ್ರ ಪಾರೇಕಟ್, ಕೆ.ಎಂ.ಝಕ್ರಿಯಾ ಹಾಜರಿದ್ದರು.