ಮೀಟರ್ ಬಡ್ಡಿ ದಂಧೆಕೋರರ ವಿರುದ್ಧ ‘ಸ್ವಯಂ ಪ್ರೇರಿತ ದೂರು' ಬೇಡ
ನೀಲಮಣಿ ಎನ್. ರಾಜು
ಬೆಂಗಳೂರು, ಅ.13: ಗೃಹ ಇಲಾಖೆ ಬಡ್ಡಿ ದಂಧೆಕೋರರ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಬಾರದೆಂದು ಆದೇಶ ಹೊರಡಿಸಿದೆ.
ಕೇಂದ್ರ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ನೇತೃತ್ವದಲ್ಲಿ ಇತ್ತೀಚೆಗೆ ಮೀಟರ್ ಬಡ್ಡಿ ದಂಧೆ ಕೋರರ ಮೇಲೆ ದಾಳಿ ನಡೆಸಿ 69.16 ಲಕ್ಷ ರೂ., 258 ಚೆಕ್ಗಳು, 52 ಆನ್ ಡಿಮಾಂಡ್ ನೋಟ್ಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಆದರೆ ಅವರು ಬಡ್ಡಿ ದಂಧೆಕೋರರ ಮೇಲೆ ದಾಳಿ ನಡೆಸಿದ ಎರಡೇ ದಿನಗಳಲ್ಲಿ 'ಪೊಲೀಸರು ಬಡ್ಡಿ ದಂಧೆಕೋರರ ಮೇಲೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಬಾರದು, ಸಹಕಾರ ಇಲಾಖೆಯ ರಿಜಿಸ್ಟ್ರಾರ್ ಅಥವಾ ಅಸಿಸ್ಟೆಂಟ್ ರಿಜಿಸ್ಟ್ರಾರ್ ಅವರಿಂದ ದೂರು ಬಂದಲ್ಲಿ ಮಾತ್ರ ಪ್ರಕರಣ ದಾಖಲಿಸಬೇಕು ಎಂದು ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು ಆದೇಶ ಹೊರಡಿಸಿದ್ದಾರೆ.
ಪೊಲೀಸ್ ಇಲಾಖೆಯ ಈ ಸುತ್ತೋಲೆ ಹಲವು ಪ್ರಶ್ನೆಗಳನ್ನ ಹುಟ್ಟು ಹಾಕಿದೆ.ಅಲ್ಲದೆ, ಮೀಟರ್ ಬಡ್ಡಿ ದಂಧೆ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪೊಲೀಸರಿಗೆ ಆದೇಶಿಸಿದ್ದರು.
ತದನಂತರ ಕಳೆದ ಕೆಲ ದಿನಗಳ ಹಿಂದೆ ಸಿಸಿಬಿ 10 ಕಡೆ ದಾಳಿ ನಡೆಸಿತ್ತು. ಈ ಸಂಬಂಧ 10 ಪ್ರಕರಣ ದಾಖಲಿಸಿ 9 ಮಂದಿಯನ್ನು ಬಂಧಿಸಲಾಗಿತ್ತು.ಆದರೆ, ಈ ಆದೇಶದಿಂದ ಹಲವು ಬಡ್ಡಿ ದಂಧೆಕೋರರು ತಪ್ಪಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ