ಎನ್ಆರ್ಸಿ ಮರು ಪರಿಶೀಲನೆಗೆ ಎಸ್ಡಿಪಿಐ ಆಗ್ರಹ
ಬೆಂಗಳೂರು, ಅ.15: ಅಸ್ಸಾಂನ ಜನತೆಯನ್ನು ನಮ್ಮದೇ ಪೌರರಾಗಿ ನೋಡಿ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕೇಂದ್ರ ಸರಕಾರಕ್ಕೆ ಆಗ್ರಹಿಸಿತು.
ಸೋಮವಾರ ನಗರದ ಎನ್ಆರ್ಸಿ (ರಾಷ್ಟ್ರೀಯ ಪೌರತ್ವ ದಾಖಲೆ) ವಿರುದ್ಧ ಬೃಹತ್ ‘ರಾಜ್ ಭವನ ಚಲೋ’ ರ್ಯಾಲಿಯನ್ನು ಹಮ್ಮಿಕೊಂಡು, ರಾಷ್ಟ್ರಪತಿಯವರು ಅಸ್ಸಾಂ ರಾಜ್ಯದ ಎನ್ಆರ್ಸಿಯನ್ನು ಪರಿಶೀಲಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿತು.
ಆನ್ಆರ್ಸಿಯಲ್ಲಿ ಸಾವಿರಾರು ಜನರ ಹೆಸರುಗಳು ಬಿಟ್ಟು ಹೋಗಿದ್ದು, ಅವರ ಹತ್ತಿರದ ಸಂಬಂಧಿಗಳ ಮತ್ತು ಕುಟುಂಬ ಸದಸ್ಯರ ಹೆಸರುಗಳು ದಾಖಲಾಗಿವೆ. ಅಲ್ಲದೆ, 40 ಲಕ್ಷ ಜನರನ್ನು ದಾಖಲೆಯಿಂದ ಹೊರಗಿಟ್ಟಿದ್ದು ಆ ರಾಜ್ಯದಲ್ಲಿ ಬಂಗಾಳಿ ಭಾಷೆ ಮಾತನಾಡುವ ಬಡ ಹಾಗೂ ಹಿಂದುಳಿದ ಜನತೆಯ ಪರಿಸ್ಥಿತಿಯು ಅತ್ಯಂತ ದಯನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು.
ಎನ್ಆರ್ಸಿಯಿಂದ ಹೊರಗಿರುವವರು ಸಮಾಜ ಹಾಗೂ ಆಡಳಿತದಿಂದ ಭಾರೀ ಅಪನಂಬಿಕೆ, ಸಂಘರ್ಷ ಹಾಗೂ ಶೋಷಣೆಗೆ ಒಳಗಾಗುವ ಎಲ್ಲ ಸಾಧ್ಯತೆಗಳು ಕಂಡು ಬರುತ್ತವೆ. ಇದು ಅಸ್ಸಾಂ ಮತ್ತು ನೆರೆಹೊರೆಯ ರಾಜ್ಯಗಳಲ್ಲಿ ಆಡಳಿತ ನಿರ್ಮಿತ ನಾಗರಿಕ ಸಮಸ್ಯೆಗಳಿಗೆ ದೂಡುವ ಸಾಧ್ಯತೆಯಿದೆ. ಸರಕಾರ ಎನ್ಆರ್ಸಿಯ ಬಗ್ಗೆ ಹಠಮಾರಿ ಧೋರಣೆ ತೋರದೆ ಅಸ್ಸಾಂನ ಪ್ರತಿಯೊಬ್ಬ ನಾಗರಿಕರನ್ನು ದಾಖಲೆಯಲ್ಲಿ ಸೇರಿಸಿ ಭಾರತ ದೇಶದ ಪ್ರಜೆಯನ್ನಾಗಿ ಪರಿಗಣಿಸಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಒತ್ತಾಯಿಸಿತು.