ಯಲಹಂಕ ಕ್ಷೇತ್ರದ ಆಮೂಲಾಗ್ರ ಅಭಿವೃದ್ಧಿಗೆ ಆದ್ಯತೆ: ಎಸ್.ಆರ್.ವಿಶ್ವನಾಥ್
ಬೆಂಗಳೂರು, ಅ.16: ನಗರದ ಯಲಹಂಕ ಕ್ಷೇತ್ರದ ಗ್ರಾಮ ಪಂಚಾಯತ್ಗಳನ್ನು ಉನ್ನತ ಮಟ್ಟಕ್ಕೆ ಏರಿಸಲು ಶ್ರಮಿಸುವುದಾಗಿ ಶಾಸಕ ಎಸ್.ಆರ್.ವಿಶ್ವನಾಥ್ ತಿಳಿಸಿದರು.
ಬೆಂಗಳೂರು ಉತ್ತರ ತಾಲೂಕು ಯಲಹಂಕದ ರಾಜಾನುಕುಂಟೆ ಗ್ರಾಮ ಪಂಚಾಯತ್ನಲ್ಲಿ 80ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ರಾಜ್ಯದ ಮೊಟ್ಟಮೊದಲ ಸೋಲಾರ್ ಗ್ರಾಮಪಂಚಾಯತ್ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇದೇ ಮೊದಲ ಬಾರಿಗೆ ಗ್ರಾಮಪಂಚಾಯತ್ನ ಸಂಪೂರ್ಣ ಕಟ್ಟಡ ಸೋಲಾರ್ ವಿದ್ಯುತ್ ಬಳಕೆಯಲ್ಲೆ ಕಾರ್ಯನಿರ್ವಹಿಸುತ್ತಿದೆ. ಈ ಗ್ರಾಮಪಂಚಾಯತ್ನಿಂದ 18ಕೆವಿ ವಿದ್ಯುತ್ ಬೆಸ್ಕಾಂಗೆ ಮಾರಾಟ ಮಾಡುತ್ತಿರುವುದು ವಿಶೇಷ. ಉಚಿತವಾಗಿ ಮೂರು ಅಂಗನವಾಡಿ ಕೇಂದ್ರಗಳಿಗೂ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಮಾರಸಂದ್ರ ಬಳಿಯ ಟೋಲ್ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳಾಗಿದ್ದು, ನನಗೂ ಅದಕ್ಕೂ ಯಾವುದೆ ಸಂಬಂಧವಿಲ್ಲ. ಆದರೂ ಕೆಲವರು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಟೋಲ್ ನಿರ್ಮಾಣ ಮಾಡುತ್ತಿರುವವರ ಬಳಿ ನಾನು ಯಾವುದೆ ರೀತಿಯ ವ್ಯವಹಾರ ಮಾಡುತ್ತಿಲ್ಲವೆಂದು ಖಚಿತ ಪಡಿಸಿದರು.