ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಕೊರತೆ: ಸಿಎಂ ಕುಮಾರಸ್ವಾಮಿ
ಬೆಂಗಳೂರು, ಅ. 17: ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಕೊರತೆ ಉಂಟಾಗಿದ್ದು, ಕರ್ನಾಟಕಕ್ಕೆ ಅಗತ್ಯವಿರುವ ಕಲ್ಲಿದ್ದಲನ್ನೂ ಕೂಡಲೇ ಪೂರೈಕೆ ಮಾಡಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ, ಕೇಂದ್ರ ಕಲ್ಲಿದ್ದಲು ಸಚಿವರಿಗೆ ಮನವಿ ಮಾಡಿದ್ದಾರೆ.
1720 ಮೆಗಾವ್ಯಾಟ್ ಸಾಮರ್ಥ್ಯದ ರಾಯಚೂರು ಉಷ್ಣ ಸ್ಥಾವರದಲ್ಲಿ ಶೂನ್ಯ ಕಲ್ಲಿದ್ದಲು ಸಂಗ್ರಹಣೆ ಇದೆ. ಈ ಸ್ಥಿತಿಗೆ ಕಾರಣ, ಕೇಂದ್ರ ಸರಕಾರಿ ಸ್ವಾಮ್ಯದ ವೆಸ್ಟರ್ನ್ ಕೋಲ್ ಫೀಲ್ಡ್ಸ್ ಕಲ್ಲಿದ್ದಲು ಪೂರೈಕೆ ಒಪ್ಪಂದದ ಪ್ರಕಾರ ನೀಡ ಬೇಕಾಗಿದ್ದ ಕಲ್ಲಿದ್ದಲಿನ ಒಟ್ಟು ಪ್ರಮಾಣದಲ್ಲಿ ಸುಮಾರು 6 ಲಕ್ಷ ಟನ್ಗಳಷ್ಟು ಕಲ್ಲಿದ್ದಲನ್ನು ಈವರೆಗೆ ಪೂರೈಕೆ ಮಾಡಿಲ್ಲ ಎಂದು ಪತ್ರದ ಮೂಲಕ ಕೇಂದ್ರದ ಗಮನ ಸೆಳೆದಿದ್ದಾರೆ.
ಈ ಪ್ರಮಾಣದ ಕೊರತೆಯನ್ನು ಕೇಂದ್ರ ಸರಕಾರಿ ಸ್ವಾಮ್ಯದ ಎಂಸಿಎಲ್ ಮುಖಾಂತರ ಪೂರೈಕೆ ಮಾಡಬೇಕೆಂದು ನಾನು ಕೇಂದ್ರ ಕಲ್ಲಿದ್ದಲು ಸಚಿವ ಪಿಯೂಷ್ ಗೋಯಲ್ ಅವರಿಗೆ ಮನವಿ ಮಾಡಿದ್ದು, ಮುಂದಿನ ದಿನಗಳಲ್ಲಿ ಡಬ್ಲೂಎಲ್ಸಿನಿಂದ ಒಪ್ಪಂದದ ಪ್ರಕಾರ ಪೂರ್ಣ ಪ್ರಮಾಣದ ಕಲ್ಲಿದ್ದಲು ಪೂರೈಕೆ ಮಾಡುವುದರೊಂದಿಗೆ ರಾಜ್ಯಕ್ಕೆ ನಿರಂತರ ವಿದ್ಯುತ್ ಉತ್ಪಾದನೆಗೆ ಸಹಕರಿಸಬೇಕು ಎಂದು ಕುಮಾರಸ್ವಾಮಿ ಪತ್ರದಲ್ಲಿ ಕೋರಿದ್ದಾರೆ.