ಅಶ್ಲೀಲ ಕಮೆಂಟ್: ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸುವಂತೆ ನಿರ್ದೇಶಕ ಪ್ರೇಮ್ ದೂರು
ಬೆಂಗಳೂರು, ಅ.23: ಸಾಮಾಜಿಕ ಜಾಲತಾಣದಲ್ಲಿ ವಿಕೃತ ಕಮೆಂಟ್ಗಳನ್ನು ಹಾಕುವ ಮೂಲಕ ಕೆಲವರು ನನ್ನ ವೈಯಕ್ತಿಕ ನಿಂದನೆಯಲ್ಲಿ ತೊಡಗಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಸಿನೆಮಾ ನಿರ್ದೇಶಕ ಪ್ರೇಮ್ ಇಲ್ಲಿನ ಉಪ್ಪಾರಪೇಟೆ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನನ್ನ ಹಾಗೂ ಕುಟುಂಬದ ಸದಸ್ಯರ ಮೇಲೆ ವೈಯಕ್ತಿಕವಾಗಿ ನಿಂದಿಸಲಾಗಿದೆ. ಸಿನಿಮಾ ವಿಮರ್ಶೆ ಬಿಟ್ಟು ವೈಯಕ್ತಿಕವಾಗಿ ಟೀಕೆ ಮಾಡಲಾಗಿದೆ. ಇದರಿಂದ ನಾನು ಮಾನಸಿಕ ನೋವು ಅನುಭವಿಸುತ್ತಿದ್ದು, ಆರೋಪಿಗಳನ್ನು ಪತ್ತೆಹಚ್ಚಿ ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ಪ್ರೇಮ್ ಮನವಿ ಮಾಡಿದ್ದಾರೆ.
ದೂರಿನೊಂದಿಗೆ ಕೆಲವು ವೀಡಿಯೋ ಮತ್ತು ದಾಖಲೆಗಳನ್ನು ಪ್ರೇಮ್ ಪೊಲೀಸರಿಗೆ ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಾರಪೇಟೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೇಮ್, ಕೆಲವರು ವೈಯಕ್ತಿಕ ನೆಲೆಯಲ್ಲಿ ನನ್ನನ್ನು ನಿಂದಿಸಿದ್ದಾರೆ. ಆದ್ದರಿಂದ ಅವರ ವಿರುದ್ಧ ಕಾನೂನು ಪ್ರಕಾರ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದೇನೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ವರೆಗೂ ಹೋಗಲಾಗುವುದು ಎಂದು ತಿಳಿಸಿದರು.