ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ ಪ್ರಧಾನಿ ಮೋದಿ: ಡಿಸಿಎಂ ಪರಮೇಶ್ವರ್
ಜಮಖಂಡಿ, ಅ. 24: ಶರವೇಗದಲ್ಲಿ ಬಂದ ಪ್ರಧಾನಿ ಮೋದಿ, ದೇಶದ ಅಭಿವೃದ್ಧಿ ಮಾತಿರಲಿ, ಇಡೀ ಆರ್ಥಿಕ ವ್ಯವಸ್ಥೆಯನ್ನೇ ಸಂಪೂರ್ಣ ಬುಡಮೇಲು ಮಾಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಲೇವಡಿ ಮಾಡಿದ್ದಾರೆ.
ಬುಧವಾರ ಇಲ್ಲಿನ ಜಮಖಂಡಿ ವಿಧಾನಸಭಾ ಕ್ಷೇತ್ರದ ಹುಲ್ಯಾಳ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪಾದಯಾತ್ರೆ ನಡೆಸಿ, ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಲೋಕಸಭೆ ಚುನಾವಣೆಯಲ್ಲಿ ಇಡೀ ದೇಶದ ಆರ್ಥಿಕ ದಿಕ್ಕನ್ನೇ ಬದಲಿಸುವ ಮಾತುಗಳನ್ನು ಹೇಳಿ ಜನರನ್ನು ದಿಕ್ಕುತಪ್ಪಿಸಿ ಮೋದಿ ಅಧಿಕಾರ ಪಡೆದಿದ್ದಾರೆಂದು ಟೀಕಿಸಿದರು.
ಶರವೇಗದಲ್ಲಿ ಎಲ್ಲ ಕೆಲಸ ಮಾಡುವೆ ಎಂದು ಹೇಳಿಕೊಂಡು ಬಂದ ಮೋದಿ ಇಡೀ ಆಡಳಿತ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದಾರೆಂದು ವಾಗ್ದಾಳಿ ನಡೆಸಿದ ಅವರು, ಜಮಖಂಡಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಕೈಗೊಳ್ಳಲು ಸಿದ್ದು ನ್ಯಾಮಗೌಡರು ಮುಂದಾಗಿದ್ದರು ಎಂದರು. ಇದೀಗ ಆ ಎಲ್ಲ ಕೆಲಸಗಳನ್ನು ಅವರ ಪುತ್ರ ಆನಂದ್ ನ್ಯಾಮಗೌಡ ಮಾಡಲು ಹೊರಟಿದ್ದಾರೆ. ಇವರಿಗೆ ನಮ್ಮ ಮೈತ್ರಿ ಸರಕಾರದಿಂದ ಸಂಪೂರ್ಣ ಬೆಂಬಲವಿದೆ. ಆದುದರಿಂದ ಕ್ಷೇತ್ರದ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಆನಂದ್ ಅವರನ್ನು ಗೆಲ್ಲಿಸಬೇಕು ಎಂದು ಡಾ.ಪರಮೇಶ್ವರ್ ಮನವಿ ಮಾಡಿದರು.