ಹುಬ್ಬಳ್ಳಿ: ಪ್ರಾಮಾಣಿಕತೆ ಮೆರೆದ ಆಟೋ ಚಾಲಕ
ಹುಬ್ಬಳ್ಳಿ, ಅ.28: ಪ್ರಯಾಣಿಕರು ಬಿಟ್ಟು ಹೋಗಿದ್ದ ಸುಮಾರು ಒಂದೂವರೆ ಲಕ್ಷ ಹಣವನ್ನು ಮಾಲಕರಿಗೆ ತಂದೊಪ್ಪಿಸಿ ಆಟೋ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾನೆ.
ಇಂದಿನ ದಿನಗಳಲ್ಲಿ ಹೇಗಾದರೂ ಮಾಡಿ ಹಣ ಸಂಪಾದನೆ ಮಾಡುವವರೇ ಹೆಚ್ಚಾಗಿದ್ದು, ಪ್ರಾಮಾಣಿಕತೆ ಅನ್ನೋದು ಕಣ್ಮರೆಯಾಗುತ್ತಿದೆ. ಹುಬ್ಬಳ್ಳಿಯ ಆಟೋ ಚಾಲಕ ಅಬ್ದುಲ್ ಸಾಬ್ ಎಂಬುವವರು ತನ್ನ ಆಟೋದಲ್ಲಿ ದೊರೆತೆ ಹಣವನ್ನು ಮಾಲಕರಿಗೆ ತಲುಪಿಸಿ ಪ್ರಾಮಾಣಿಕತೆಗೆ ಹಿಡಿದ ಕೈಗನ್ನಡಿಯಾಗಿದ್ದಾರೆ.
ಹಾವೇರಿ ಮೂಲದ ಸಂಜಯ್ ಗೋಕರ್ಣಕರ್ ಎಂಬುವವರು ಕೆಲಸದ ನಿಮಿತ್ತ ಹುಬ್ಬಳ್ಳಿಗೆ ಬಂದಿದ್ದು, ಆಟೋದಲ್ಲಿ ಪ್ರಯಾಣ ಮಾಡಿ ನಂತರ ಹಣವಿದ್ದ ಬ್ಯಾಗನ್ನು ಆಟೋದಲ್ಲೇ ಬಿಟ್ಟು ಪಗಡಿ ಗಲ್ಲಿಯಲ್ಲಿ ಇಳಿದು ಹೋಗಿದ್ದಾರೆ. ಸುಮಾರು ಸಮಯದ ನಂತರ ಬ್ಯಾಗನ್ನು ನೆನಪಿಸಿಕೊಂಡಿದ್ದಾರೆ. ನಂತರ ಪ್ರಯಾಣಿಸಿದ ಆಟೋವನ್ನು ಹುಡುಕಾಡಿದ್ದಾರೆ. ಎಲ್ಲಿಯೂ ಪತ್ತೆಯಾಗದಿದ್ದಾಗ ಠಾಣೆಗೆ ದೂರು ನೀಡಲು ಹೋಗುತ್ತಿದ್ದಾಗ ಅವರಿಗಿಂತ ಮೊದಲೇ ಅಬ್ದುಲ್ ಸಾಬ್ ಗಂಟಿಕೆರೆ ಪೊಲೀಸ್ ಠಾಣೆಗೆ ತೆರಳಿ ಬ್ಯಾಗನ್ನು ತಲುಪಿಸಿದ್ದಾರೆ. ಆಟೋ ಚಾಲಕನ ಪ್ರಾಮಾಣಿಕತೆನ್ನು ಕಂಡ ಪೊಲೀಸರು ಹಣವನ್ನು ಮಾಲಕರಿಗೆ ಒಪ್ಪಿಸಿ ಚಾಲಕನಿಗೆ 5 ಸಾವಿರ ರೂ.ಬಹುಮಾನ ನೀಡಿ ಗೌರವಿಸಿದ್ದಾರೆ.