'ಒಪನ್ ಬೆಂಗಳೂರು- 2018' ಚಾಲನೆ ನೀಡಿದ ಉಪಮುಖ್ಯಮಂತ್ರಿ ಡಾ. ಪರಮೇಶ್ವರ್
ಬೆಂಗಳೂರು, ನ. 12: 2ನೇ ಬಾರಿ ಬೆಂಗಳೂರಿನ ಟೆನ್ನಿಸ್ ಸ್ಟೇಡಿಯಂನಲ್ಲಿ ಕೆಎಸ್ಎಲ್ಟಿಎ ಹಾಗೂ ಎಸಿಟಿ ಫೈಬರ್ನೆಟ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ಟೆನ್ನಿಸ್ ಟೂರ್ನಮೆಂಟ್ನ ಬೆಂಗಳೂರು ಒಪನ್-2018ನ್ನು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಉದ್ಘಾಟಿಸಿ, ಆಟಗಾರರಿಗೆ ಶುಭಾಶಯ ತಿಳಿಸಿದರು.
ಕೇಂದ್ರ ಸಚಿವ ಅನಂತ ಕುಮಾರ್ ಅವರ ನಿಧನಕ್ಕೆ ಮೌನಾಚಾರಣೆ ಸಲ್ಲಿಸಿ, ಬಳಿಕ ಟೂರ್ನಮೆಂಟ್ನನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಬೆಂಗಳೂರು ಕ್ರೀಡೆಗೆ ಉತ್ತೇಜನ ನೀಡುವ ನಗರವಾಗಿದೆ. ಎರಡನೇ ಬಾರಿ ಬೆಂಗಳೂರಿನಲ್ಲಿ ಟೆನ್ನಿನ್ ಟೂರ್ನಮೆಂಟ್ ಆಯೋಜನೆ ಮಾಡಲಾಗಿದೆ. ಕಳೆದ ಬಾರಿ 100,000 ಡಾಲರ್ಸ್ ಮೊತ್ತದ ಸ್ಪರ್ಧೆಯಾಗಿತ್ತು. ಈ ಬಾರಿ 150,000 ಡಾಲರ್ಸ್ ಸ್ಪರ್ಧೆಯ ಮೊತ್ತ ಇಡಲಾಗಿದೆ ಎಂದರು.
ಬೆಂಗಳೂರು ಒಪನ್ ಕಾರ್ಯಕ್ರಮವನ್ನು ಅದ್ಧೂರಿಯ ಉದ್ಘಾಟಿಸುವ ಯೋಜನೆ ಇತ್ತು. ಆದರೆ ಅನಂತ ಕುಮಾರ್ ಅವರ ನಿಧನದ ಹಿನ್ನೆಲೆಯಲ್ಲಿ ಅವರಿಗೆ ಗೌರವಾರ್ಥವಾಗಿ ಸರಳವಾಗಿ ಉದ್ಘಾಟಿಸಲಾಗಿದೆ. ಆದರೂ ಟೂರ್ನಮೆಂಟ್ನಲ್ಲಿ ಭಾಗವಹಿಸುವ ಎಲ್ಲ ಆಟಗಾರರು ಉತ್ತಮ ಆಟ ಪ್ರದರ್ಶಿಸಬೇಕು ಎಂದು ಶುಭಕೋರಿದರು. ಟೆನ್ನಿಸ್ ಟೂರ್ನಮೆಂಟ್ ಕಮಿಟಿ ಅಧ್ಯಕ್ಷ , ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಪಾಲ್ಗೊಂಡಿದ್ದರು.