ಅಜ್ಮೀರಾ ಚಿಟ್ ಫಂಡ್ ಕಂಪೆನಿ ವಂಚನೆ ಆರೋಪ: ಸಿಸಿಬಿ ಎದುರು ಪ್ರತಿಭಟನೆ
ಬೆಂಗಳೂರು, ನ.17: ಆ್ಯಂಬಿಡೆಂಟ್ ವಂಚನೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ, ಅಜ್ಮೀರಾ ಚಿಟ್ ಫಂಡ್ ಕಂಪೆನಿಯೂ ಗ್ರಾಹಕರಿಗೆ ವಂಚಿಸಿದೆ ಎಂದು ಆರೋಪಿಸಿ ನಗರದ ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಜಯನಗರ, ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಅಜ್ಮೀರಾ ಗ್ರೂಪ್ ಚಿಟ್ ಫಂಡ್ ಮಾಲಕ ತಬ್ರೇಝ್ ಪಾಷಾ ಹಾಗೂ ಅಬ್ದುಲ್ ದಸ್ತಗಿರ್ ಎಂಬವರ ಮೇಲೆ ದೂರು ನೀಡಿದ್ದರೂ, ಇದುವರೆಗೂ ಕ್ರಮ ಜರುಗಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಅಜ್ಮೀರಾ ಕಂಪೆನಿ ಸುಮಾರು 3 ಸಾವಿರಕ್ಕೂ ಹೆಚ್ಚು ಮಂದಿಗೆ 500 ಕೋಟಿಗೂ ಹೆಚ್ಚಿನ ಹಣ ವಂಚಿಸಿದೆ ಎನ್ನಲಾಗಿದೆ. ಕಂಪೆನಿಗೆ ಹಣ ಹೂಡಿಕೆ ಮಾಡಿದರೆ 4 ತಿಂಗಳಿಗೆ ದುಪ್ಪಟ್ಟು ಹಣ ನೀಡುವ ಭರವಸೆ ನೀಡಿ, ಗ್ರಾಹಕರಿಂದ ಹಣ ವಸೂಲಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ವಂಚನೆ ಆರೋಪ ಪ್ರಕರಣ ಸಂಬಂಧ ಆರೋಪಿಗಳು 6 ತಿಂಗಳೊಳಗಾಗಿ ಗ್ರಾಹಕರ ಹಣವನ್ನು ಹಿಂದಿರುಗಿಸುವಂತೆ ಹೇಳಿ ಜಾಮೀನು ಮೇಲೆ ಹೊರಬಂದಿದ್ದಾರೆ. ಆದರೆ, ಈ ಪ್ರಕರಣ ಸಿಸಿಬಿಗೆ ವರ್ಗಾವಣೆ ಆಗುತ್ತಿದ್ದಂತೆ ಇದೀಗ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪ್ರತಿಭಟನೆ ನಿರತ ರಸೂಲ್ ಎಂಬುವರು ಆರೋಪಿಸಿದರು.
ಸದ್ಯ ಸಾರ್ವಜನಿಕರು ಅಜ್ಮೀರಾ ಕಂಪೆನಿ ಸಿಸಿಬಿಯಲ್ಲಿಯೇ ಇದೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ತಕ್ಷಣವೇ ಕಾರ್ಯ ಪ್ರಗತಿಗೊಳಿಸಿ ಹಣ ವಾಪಸ್ಸು ಕೊಡಿಸುವಂತೆ ಪ್ರತಿಭಟನಾಕಾರರು ಘೋಷಣೆ ಕೂಗಿದರು.