ದೇವೇಗೌಡ ಅನುಪಸ್ಥಿತಿಯಲ್ಲಿ ಪತ್ನಿ ಚೆನ್ನಮ್ಮಗೆ ಕರ್ನಾಟಕ ರೈತ ರತ್ನ ಪ್ರಶಸ್ತಿ ಪ್ರದಾನ
ಬೆಂಗಳೂರು, ನ.18: ಕರ್ನಾಟಕ ಮಹಿಳಾ ರಕ್ಷಣಾ ವೇದಿಕೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ರೈತ ರತ್ನ ಪ್ರಶಸ್ತಿಯನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಅನುಪಸ್ಥಿತಿಯಲ್ಲಿ ಅವರ ಪತ್ನಿ ಚೆನ್ನಮ್ಮ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ರವಿವಾರ ನಗರದ ಪುರಭವನದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಓಂ ರಾಜ್ ನೃತ್ಯ ತಂಡದ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ರಂಗಬದುಕು ಟ್ರಸ್ಟ್ ತಂಡದವರಿಂದ ರೈತನ ಮಕ್ಕಳು ಎಂಬ ನಾಟಕ ನಡೆಯಿತು. ಸ್ಫೂರ್ತಿ ಮಹಿಳಾ ಕಲಾ ತಂಡದವರಿಂದ ಮಹಿಳಾ ತಮಟೆ ವಾದ್ಯ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು.
ಕಾರ್ಯಕ್ರಮದಲ್ಲಿ ಬಾರ್ಕೂರು ಮಠದ ವಿಶ್ವಸಂತೋಷ ಭಾರತಿ, ಪೀಠಾಧಿಪತಿ ಮಧುಸೂದನಾನಂದಪುರಿ, ದಾಸಸಾಹಿತ್ಯ ಧುರೀಣ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ, ಶಾಸಕಿ ಸೌಮ್ಯರೆಡ್ಡಿ, ಹಿರಿಯ ವಕೀಲ ಶ್ಯಾಮ್ಸುಂದರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಾಯಣ್ಣ, ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಸುಬ್ರಮಣಿ(ಕರಿಸುಬ್ಬು), ರಾಜ್ಯ ಮಹಿಳಾ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷೆ ಎನ್.ಭಾರ್ಗವಿ ಮತ್ತಿತರರು ಉಪಸ್ಥಿತರಿದ್ದರು.