ಬಂಧನ ಭೀತಿಯಲ್ಲಿ ನಿತ್ಯಾನಂದ
ಬೆಂಗಳೂರು, ನ.21: ಗಾಂಜಾ ಸೇವನೆ ಮಾಡಿದರೆ ಮುಕ್ತಿ ಸಿಗುತ್ತದೆ ಎಂಬ ವಿಡಿಯೊ ಸಂದೇಶ ನೀಡಿರುವ ಆರೋಪ ಪ್ರಕರಣ ಸಂಬಂಧ ಬಿಡದಿ ಆಶ್ರಮದ ಸ್ವಾಮಿ ನಿತ್ಯಾನಂದನಿಗೆ ಬಂಧನ ಭೀತಿ ಎದುರಾಗಿದೆ ಎಂದು ತಿಳಿದುಬಂದಿದೆ.
ಗಾಂಜಾ ಸೇವನೆಯಿಂದ ಆಕಾಶದಲ್ಲಿ ತೇಲಬಹುದು ಎಂದು ವಿಡಿಯೊವೊಂದರಲ್ಲಿ ನಿತ್ಯಾನಂದ ಹೇಳಿದ್ದ. ಬಳಿಕ ಸಿಸಿಬಿ ಪೊಲೀಸರು ನೋಟಿಸ್ ನೀಡಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ, ನಿತ್ಯಾನಂದ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ, ಸಿಸಿಬಿ ಪೊಲೀಸರು ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಏನಿದು ಪ್ರಕರಣ: ಇತ್ತೀಚಿಗೆ ವಿಡಿಯೋ ಸಂದೇಶ ಒಂದನ್ನು ನಿತ್ಯಾನಂದ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ. ಅದು ವೈರಲ್ ಆಗುತ್ತಿದ್ದಂತೆ ಅದನ್ನು ಡಿಲೀಟ್ ಮಾಡಿದ್ದ ಎನ್ನಲಾಗಿದೆ.
ಆ ವಿಡಿಯೋದಲ್ಲಿ ಸ್ವಾಮಿ ನಿತ್ಯಾನಂದ ಗಾಂಜಾ ಅಫೀಮು ಸೇವನೆ ಮಾಡುವಂತೆ ಸಾರ್ವಜನಿಕರಿಗೆ ಪ್ರಚೋದನೆ ಮಾಡಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ನಿತ್ಯಾನಂದನ ವಿರುದ್ಧ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಸೋಮವಾರ ಬಿಡದಿ ಆಶ್ರಮಕ್ಕೆ ತೆರಳಿದ ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಆದರೆ, ಆಶ್ರಮದಲ್ಲಿ ನಿತ್ಯಾನಂದ ಇಲ್ಲದ ಹಿನ್ನೆಲೆಯಲ್ಲಿ ನಿತ್ಯಾನಂದನ ಶಿಷ್ಯರು ನೋಟಿಸ್ ಸ್ವೀಕರಿಸಿದ್ದಾರೆ ಎಂದು ತಿಳಿದು ಬಂದಿದೆ.