ಕತ್ತು ಕೊಯ್ದು ಗೃಹಿಣಿ ಕೊಲೆ ಪ್ರಕರಣ: ದುಷ್ಕರ್ಮಿಗಳಿಗಾಗಿ ಶೋಧ
ಬೆಂಗಳೂರು, ನ.21: ಹಾಡಹಗಲೇ ಮನೆಗೆ ನುಗ್ಗಿ ಗೃಹಿಣಿಯ ಕತ್ತು ಕೊಯ್ದು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಮೂರ್ತಿನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದು, ದುಷ್ಕರ್ಮಿಗಳಿಗಾಗಿ ಶೋಧ ಮುಂದುವರೆಸಿದ್ದಾರೆ.
ಚಿಕ್ಕ ಬಾಣಸವಾಡಿಯಲ್ಲಿ ವಾಸವಾಗಿರುವ ತಮಿಳುನಾಡು ಮೂಲದ ಕೃಷ್ಣಮೂರ್ತಿ ಎಂಬುವರ ಪತ್ನಿ ಮೇಘಳಾದೇವಿ ಕೊಲೆಯಾಗಿದ್ದ ಮಹಿಳೆ. ಮಂಗಳವಾರ ಹಗಲು ವೇಳೆಯಲ್ಲೇ ಕತ್ತು ಕೊಯ್ದು ಕೊಲೆ ಮಾಡಲಾಗಿದ್ದು, ನಿಖರ ಕಾರಣ ಏನೆಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಮೇಘಳಾದೇವಿ ಮನೆಯಲ್ಲಿ ಒಂಟಿಯಾಗಿರುವುದನ್ನು ತಿಳಿದುಕೊಂಡೇ ದುಷ್ಕರ್ಮಿಗಳು ಒಳನುಗ್ಗಿ ಕೃತ್ಯವೆಸಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಒಟ್ಟಾರೆ ಈ ಕೊಲೆ ನಿಗೂಢವಾಗಿದ್ದು, ಹಳೆ ದ್ವೇಷದಿಂದಲೋ, ಹಣಕ್ಕಾಗಿಯೋ ಅಥವಾ ಇನ್ನಿತರ ಕಾರಣಗಳಿಗೆ ಕೊಲೆ ನಡೆದಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಮೇಘಳಾದೇವಿ ಮೃತ ದೇಹವನ್ನು ಯಲಹಂಕದ ಅಂಬೇಡ್ಕರ್ ಮೆಡಿಕಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.