ಬಿಬಿಎಂಪಿ: ವಿಶೇಷ ಆಯುಕ್ತ ರಂದೀಪ್ ವರ್ಗಾವಣೆಗೆ ತೀವ್ರ ವಿರೋಧ
ಬೆಂಗಳೂರು, ಡಿ.4: ಬಿಬಿಎಂಪಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತರಾಗಿದ್ದ ರಂದೀಪ್ರನ್ನು ವರ್ಗಾವಣೆ ಮಾಡಿರುವ ಸರಕಾರದ ನಿರ್ಧಾರಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಹಿ ಸಂಗ್ರಹಕ್ಕೆ ಮುಂದಾಗಿದ್ದಾರೆ.
ಬೆಂಗಳೂರು ನಗರದಲ್ಲಿ ಹಲವು ದಿನಗಳಿಂದ ತ್ಯಾಜ್ಯ ವಿಲೇವಾರಿ ಸೇರಿದಂತೆ ಹಲವು ಸಮಸ್ಯೆಗಳ ಪರಿಹಾರ ಮಾಡಲು ಕಠಿಣ ಕ್ರಮಗಳನ್ನು ಅವರು ಕೈಗೊಂಡಿದ್ದರು. ಅಲ್ಲದೆ, 2019 ರ ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿಯೂ ಬೆಂಗಳೂರು ನಗರಕ್ಕೆ ಉತ್ತಮ ಸ್ಥಾನ ದೊರಕಿಸಲು ಪ್ರಯತ್ನದ ಭಾಗವಾಗಿ ಹಲವು ಕಾರ್ಯಕ್ರಮಗಳನ್ನೂ ಕೈಗೊಂಡಿದ್ದರು. ಅಲ್ಲದೆ, ನಾಗರಿಕ ಕ್ಷೇಮಾಭಿವೃದ್ಧಿ ಸಂಸ್ಥೆಗಳೊಂದಿಗೂ ನಿರಂತರವಾದ ಸಂಪರ್ಕ ಸಾಧಿಸಿ ಸಮಸ್ಯೆಗಳ ಪರಿಹಾರಕ್ಕಾಗಿ ಕೆಲಸ ಮಾಡುತ್ತಿದ್ದರು.
ಇದೀಗ ಸರ್ವೇಕ್ಷಣ ಅಭಿಯಾನಕ್ಕೆ ಕೆಲವು ದಿನಗಳಷ್ಟೇ ಬಾಕಿ ಉಳಿದಿರುವ ಸಂದರ್ಭದಲ್ಲಿ ಅವರ ವರ್ಗಾವಣೆ ಮಾಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ಈ ವೇಳೆ ವರ್ಗಾವಣೆ ಸರಿಯಲ್ಲ ಎಂದು ಅಭಿಪ್ರಾಯಗಳು ಕೇಳಿಬಂದಿವೆ.
ವಿ ವಾಂಟ್ ಅಡಿಷನಲ್ ಕಮೀಷನರ್ ರಂದೀಪ್ ಬ್ಯಾಕ್ ಎಂಬ ಹೆಸರಿನಲ್ಲಿ ಮೀನಾಕ್ಷಿ ಪ್ರಭು ಎಂಬುವವರು ಆನ್ಲೈನ್ ಸಹಿ ಸಂಗ್ರಹಕ್ಕೆ ಚಾಲನೆ ನೀಡಿದ್ದು, ಇದನ್ನು ಬೆಂಬಲಿಸಿ 1500 ಕ್ಕೂ ಅಧಿಕ ಜನರು ಸಹಿ ಮಾಡಿದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳನ್ನು ಯಾಕೆ ವರ್ಗಾವಣೆ ಮಾಡುತ್ತಿದ್ದೀರಾ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಕೇಳಿಬರುತ್ತಿದೆ.
ವರ್ಗಾವಣೆ ಹಿಂದೆ ಸಚಿವೆ ಮನೇಕಾ ಗಾಂಧಿ?: ನಾನು ಸೂಚನೆ ನೀಡಿದ ಸಂಸ್ಥೆಗೆ ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ(ಎಬಿಸಿ) ನೀಡಬೇಕು ಎಂಬ ವಿಚಾರದಲ್ಲಿ ಕೇಂದ್ರ ಸಚಿವೆ ಮನೇಕಾಗಾಂಧಿ ಹಾಗೂ ರಂದೀಪ್ ನಡುವೆ ಈ-ಮೇಲ್ನಲ್ಲಿ ವಾದ-ವಿವಾದ ನಡೆದಿತ್ತು. ಆ ಹಿನ್ನೆಲೆಯಲ್ಲಿ ರಂದೀಪ್ ವರ್ಗಾವಣೆ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ.