ಮೈತ್ರಿ ಸರಕಾರ ಬಂಡೆಯಂತೆ ಭದ್ರವಾಗಿದೆ: ಸಿಎಂ ಕುಮಾರಸ್ವಾಮಿ
ಬೆಂಗಳೂರು, ಡಿ.5: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಬಂಡೆಯಂತೆ ಭದ್ರವಾಗಿದೆ. ಯಾರು ಏನೆ ಮಾಡಿದರು ಯಾವುದೆ ಪ್ರಯೋಜನ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ವಿಧಾನಸೌಧದ ಮುಂಭಾಗದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಸಂಖ್ಯಾತ ಸಮುದಾಯದ ಯುವಕರಿಗೆ ಟ್ಯಾಕ್ಸಿ ಹಾಗೂ ಸರಕು ಸಾಗಾಣಿಕೆ ವಾಹನಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಇನ್ನು ಆರು ತಿಂಗಳಲ್ಲಿ ಕರ್ನಾಟಕದಲ್ಲಿ ಭೂಕಂಪವಾಗಲಿದೆ. ಯಡಿಯೂರಪ್ಪ ತೆಗೆದುಕೊಳ್ಳುವ ನಿರ್ಧಾರದ ಮೇಲೆ ರಾಜಕೀಯ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇಂತಹ ಹೇಳಿಕೆಗಳು ಪ್ರತಿಕ್ರಿಯೆ ನೀಡಲು ಅರ್ಹವಾದ ವಿಷಯಗಳಲ್ಲ ಎಂದು ತಳ್ಳಿ ಹಾಕಿದರು.
ಕಳೆದ ಆರು ತಿಂಗಳಿನಿಂದಲೂ ಈ ರೀತಿಯ ಮಾತುಗಳನ್ನು ಆಡುತ್ತಲೆ ಇದ್ದಾರೆ. ಅದರಿಂದಾಗಿರುವ ಪ್ರಯೋಜನವಾದರೂ ಏನಾಗಿದೆ. ಏನೂ ಆಗಿಲ್ಲ ಹಾಗೂ ಏನೂ ಆಗುವುದೂ ಇಲ್ಲ. ಸರಕಾರ ಬಂಡೆಯಂತೆ ಭದ್ರವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.