ಜನರ ಕಲ್ಯಾಣವೇ ಬಿಬಿಎಂಪಿ ಗುರಿ: ಮಾಜಿ ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು, ಡಿ.9: ಜನರ ಕಲ್ಯಾಣವೇ ಬೆಂಗಳೂರು ಮಹಾನಗರ ಪಾಲಿಕೆಯ ಗುರಿಯಾಗಿದ್ದು, ಎಲ್ಲರನ್ನೊಳಗೊಂಡಂತೆ ಅಭಿವೃದ್ಧಿಯಾದರೆ ಮಾತ್ರ ಸಮಗ್ರ ಅಭ್ಯುದಯಕ್ಕೆ ಅರ್ಥ ಬರುತ್ತದೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಆಟದ ಮೈದಾನದಲ್ಲಿ ಆಟೋ, ಕಾರು, ಸರಕು ಸಾಗಾಣೆ ವಾಹನ, ಕುಶಲಕರ್ಮಿಗಳಿಗೆ ಕಿಟ್ ಮತ್ತಿತರ ಸೌಲಭ್ಯಗಳನ್ನು ನೀಡಿ ಮಾತನಾಡಿದ ಅವರು, ಬಿಬಿಎಂಪಿಯಿಂದ ಎಲ್ಲ ನಾಗರಿಕರಿಗೂ ಅನುಕೂಲ ಆಗುವ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಜನತೆ ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಕೆರೆ ನೀಡಿದರು.
ಬಿಬಿಎಂಪಿಯಿಂದ ಜನರ ಸಮಗ್ರ ಶ್ರೇಯೋಭಿವೃದ್ಧಿಗೆ ಪೂರಕವಾದ ಹತ್ತು, ಹಲವು ಸೌಲಭ್ಯಗಳಿವೆ. ಇವುಗಳನ್ನು ಸದ್ಭಳಕೆ ಮಾಡಿಕೊಂಡು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕು. ಕಾಂಗ್ರೆಸ್ ಪಕ್ಷ ಸರ್ವರ ಅಭಿವೃದ್ಧಿಯಲ್ಲಿ ಸಾರ್ಥಕತೆ ಕಾಣುತ್ತಿದ್ದು, ಬಿಬಿಎಂಪಿ ಸದಸ್ಯರು ಇದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ನಮ್ಮ ಬಿಬಿಎಂಪಿ ಸದಸ್ಯರು ಜನ ಮೆಚ್ಚುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ಶಾಸಕಿ ಆರ್.ಸೌಮ್ಯಾರೆಡ್ಡಿ, ಮಲ್ಲಿಕಾರ್ಜುನ ಹಾಗೂ ಪಾಲಿಕೆ ಸದಸ್ಯ ಎನ್. ನಾಗರಾಜ್ ಸಮಾರಂಭದಲ್ಲಿ ಹಾಜರಿದ್ದರು. ಬಿಬಿಎಂಪಿಯಿಂದ ಬಡವರಿಗೆ ಉಚಿತ ಕಾರು, ಆಟೊ, ಸರಕು ಸಾಗಾಣೆ ಆಟೋ, ಸೈಕಲ್ಗಳು, ಮಹಿಳೆಯರ ಸ್ವಾವಲಂಬಿ ಬದುಕಿಗೆ 50 ಹೊಲಿಗೆ ಯಂತ್ರ, ಇಸ್ತ್ರಿ ಪೆಟ್ಟಿಗೆ, ಪ್ಲಂಬರ್ ಕೆಲಸ ಮಾಡುವವರಿಗೆ ಕಿಟ್ಗಳನ್ನು ವಿತರಿಸಲಾಯಿತು.