ಅಕ್ರಮ ಜಾಹೀರಾತು ಫಲಕ ತೆರವು ವಿಚಾರ: ಹೊಸ ಜಾಹೀರಾತು ನೀತಿ ಶೀಘ್ರ ಪೂರ್ಣಗೊಳಿಸಲು ಹೈಕೋರ್ಟ್ ಸೂಚನೆ
ಬೆಂಗಳೂರು, ಡಿ.12: ನಗರದಲ್ಲಿನ ಅಕ್ರಮ ಜಾಹೀರಾತು ಫಲಕ ಮತ್ತು ಹೋರ್ಡಿಂಗ್ಸ್ ತೆರವು ಪ್ರಕರಣದ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಹೊಸ ಜಾಹೀರಾತು ನೀತಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಬಿಬಿಎಂಪಿಗೆ ಸೂಚಿಸಿದೆ.
ನಗರದಲ್ಲಿನ ಅನಧಿಕೃತ ಜಾಹೀರಾತು, ಹೋರ್ಡಿಂಗ್ಸ್ ತೆರವುಗೊಳಿಸುವ ಸಂಬಂಧ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್.ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ಸೂಚನೆ ನೀಡಿದೆ.
ಅಕ್ರಮ ಜಾಹೀರಾತು ವಿರುದ್ಧ ಎಷ್ಟು ಪ್ರಕರಣಗಳನ್ನು ದಾಖಲಿಸಿದ್ದೀರಿ ಎಂದು ನ್ಯಾಯಪೀಠವು ಎಎಜಿ ಪೊನ್ನಣ್ಣ ಅವರನ್ನು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಎಎಜಿ ಅವರು 480 ಪ್ರಕರಣ ದಾಖಲಾಗಿದ್ದು, 258 ಪ್ರಕರಣಗಳು ತನಿಖಾ ಹಂತದಲ್ಲಿವೇ ಎಂದು ಪೀಠಕ್ಕೆ ವಿವರಣೆ ನೀಡಿದರು.
ಅಕ್ರಮ ಜಾಹೀರಾತು ಹಾಗೂ ಹೋರ್ಡಿಂಗ್ಸ್ ಹಾಕಿರುವವರ ವಿರುದ್ಧ ಪ್ರಕರಣ ದಾಖಲಾಗಿ 2-3 ತಿಂಗಳುಗಳೇ ಕಳೆಯಿತು. ಆದರೆ, ಏಕೆ ಇನ್ನೂ ಪ್ರಕರಣಗಳ ತನಿಖೆಯನ್ನು ಪೂರ್ಣಗೊಳಿಸಿಲ್ಲ ಎಂದು ಎಎಜಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠವು ಪ್ರಕರಣಗಳ ತನಿಖೆಯನ್ನು ಶೀಘ್ರವಾಗಿ ಪೂರ್ಣಗೊಳಿಸಿ, ಇಲ್ಲವಾದರೆ ಬೆಂಗಳೂರಿನ ಪೊಲೀಸ್ ಆಯುಕ್ತರನ್ನೇ ಕರೆಸಿ ಪ್ರಕರಣಗಳ ಬಗ್ಗೆ ವಿವರಣೆ ಕೇಳಬೇಕಾಗುತ್ತದೆ ಎಂದು ತಿಳಿಸಿತು. ಕೆಲ ಖಾಸಗಿ ಕಂಪೆನಿಗಳ ವಕೀಲರಿಂದ ಬ್ಯಾನರ್ ತಯಾರಿಕೆ ಮಾಡುವ ಬಗೆಗಿನ ಮಾಹಿತಿ ಹಾಗೂ ಪ್ಲಾಸ್ಟಿಕ್ ಕರಗುವ ಬಗೆಗಿನ ಮಾಹಿತಿ ಒಳಗೊಂಡ ಪ್ರಮಾಣಪತ್ರವನ್ನು ನ್ಯಾಯಪೀಠವು ಪಡೆಯಿತು. ಅಲ್ಲದೆ, ಪ್ರಮಾಣ ಪತ್ರ ಪರಿಶೀಲನೆ ಮಾಡಿ ವರದಿ ನೀಡಲು ಬಿಬಿಎಂಪಿಗೆ ಸೂಚನೆ ನೀಡಿ, ವಿಚಾಣೆಯನ್ನು ಡಿ.17ಕ್ಕೆ ಮುಂದೂಡಿತು.