ನಿಯಯ ಬಾಹಿರ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿಲ್ಲ: ಎಚ್.ಡಿ.ಕುಮಾರಸ್ವಾಮಿ
ಚಳಿಗಾಲದ ಅಧಿವೇಶನ
ಬೆಳಗಾವಿ, ಡಿ.13: ಶಾಲಾ-ಕಾಲೇಜು ಸೇರಿದಂತೆ ನಿಯಮ ಬಾಹಿರವಾಗಿ ಯಾರಿಗೂ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿಲ್ಲವೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಗುರುವಾರ ವಿಧಾನ ಪರಿಷತ್ನಲ್ಲಿ ಪ್ರಶ್ನೋತ್ತರ ವೇಳೆ ತೇಜಸ್ವಿನಿಗೌಡ ಪ್ರಶ್ನೆಗೆ ಉತ್ತರಿಸಿದ ಅವರು, 1967ರ ನಿಯಮ ಉಲ್ಲಂಘಿಸಿ ರಾಜ್ಯದಲ್ಲಿ ಯಾವುದೇ ಮದ್ಯ ಮಾರಾಟ ಅಂಗಡಿ ತೆರೆಯಲು ಅವಕಾಶ ಕೊಟ್ಟಿಲ್ಲ. ಮದ್ಯ ಸೇವನೆ ಆರೋಗ್ಯಕ್ಕೆ ಅಪಾಯವೆಂದು ಬಾಟಲ್ ಮೇಲೆ ಬರೆಯಲಾಗಿದೆ. ಮದ್ಯ ಮಾರಾಟ ಖಜಾನೆಗೆ ಆದಾಯದ ಮೂಲವಾಗಿದ್ದು, ಗುಣಮಟ್ಟದ ಮದ್ಯ ಒದಗಿಸಲಾಗುತ್ತಿದೆ ಎಂದರು.
ಕೆಲವರು ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬುವುದು ತಿಳಿದಿದೆ. ಆದರೆ, ಆ ಮದ್ಯ ಎಂಎಸ್ಐ ಹೊಂದಿದ ಗುಣಮಟ್ಟದ ಮದ್ಯವಾಗಿದೆ. 18 ವರ್ಷದೊಳಗಿನ ಮಕ್ಕಳಿಗೆ ಮದ್ಯ ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ಮದ್ಯದ ಸಾಧಕ-ಬಾಧಕ ಚರ್ಚಿಸಿ ಮದ್ಯದ ಗುಣಮಟ್ಟ ಹೆಚ್ಚಿಸಲಾಗುವುದು ಎಂದರು.
ಈ ವೇಳೆ ಮಾತನಾಡಿದ ತೇಜಸ್ವಿನಿ ಗೌಡ, ಜನವಸತಿ ಹಾಗೂ ಶಾಲಾ-ಕಾಲೇಜುಗಲ ಹತ್ತಿರ ಮದ್ಯ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಸರಕಾರದ ಕ್ರಮವೇನು ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಶಾಲಾ-ಕಾಲೇಜು ವ್ಯಾಪ್ತಿಯ 100 ಮೀ. ಹತ್ತಿರ ಮದ್ಯ ಮಾರಾಟಕ್ಕೆ ಅವಕಾಶ ನೀಡಿಲ್ಲ. ಈ ಬಗ್ಗೆ ಸದಸ್ಯರಿಗೆ ತಿಳಿಸದಿದ್ದರೆ, ತಿಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.