ವಿಷಪೂರಿತ ಬೆಳ್ಳಂದೂರು ಕೆರೆಯೊಳಗೆ ನಟಿ ರಶ್ಮಿಕಾ ಫೋಟೋ ಶೂಟ್ !
ಬೆಂಗಳೂರು, ಡಿ.14: ಕೆರೆಗಳ ಮಾಲಿನ್ಯದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ 'ಕಿರಿಕ್ ಪಾರ್ಟಿ' ಚಿತ್ರ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ಬೆಳ್ಳಂದೂರು ಕೆರೆಯೊಳಗೆ ಫೋಟೋಶೂಟ್ ಮಾಡಿಸಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಶ್ಮಿಕಾ ತಾವು ಕೆರೆಯಲ್ಲಿ ತೆಗೆಸಿದ್ದ ಫೋಟೋಗಳನ್ನು ತಮ್ಮ ಟ್ವಿಟರ್ ಹಾಗೂ ಇನ್ಸ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಕೆರೆಯ ದುಸ್ಥಿತಿಯನ್ನು ಕಂಡು ನನ್ನ ಹೃದಯ ಒಡೆಯಿತು ಎಂದು ಟ್ಯಾಗ್ಲೈನ್ ನೀಡಿದ್ದಾರೆ.
ಬೆಳ್ಳಂದೂರು ಕೆರೆ ಮಾಲಿನ್ಯ ಕುರಿತು ಜಾಗೃತಿ ಮೂಡಿಸಲು ನಟಿ ರಶ್ಮಿಕಾ ಮಂದಣ್ಣ ಬೆಳ್ಳಂದೂರು ಕೆರೆ ದಂಡೆ ಮೇಲೆ ಚಿಂತಾಕ್ರಾಂತರಾಗಿ ನಿಂತಿರುವ, ಪ್ಲಾಸ್ಟಿಕ್ ಕವರ್ಗಳ ಮಧ್ಯೆ ತೇಲಾಡುತ್ತಿರುವ ಸೇರಿದಂತೆ ವಿವಿಧ ಭಂಗಿಗಳಲ್ಲಿ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಜಲಮಾಲಿನ್ಯದ ಕುರಿತು ಭಾವನಾತ್ಮಕ ಬರಹವೊಂದನ್ನು ಟ್ವೀಟ್ ಮಾಡಿದ್ದಾರೆ.
ರಶ್ಮಿಕಾ ಅವರ ಫೋಟೋಶೂಟ್ ಅನ್ನು ಸನ್ಮತಿ ಡಿ. ಪ್ರಸಾದ್ ನಿರ್ದೇಶಿಸಿದ್ದು, ಅಂಡರ್ ವಾಟರ್ ಫೋಟೋಶೂಟ್ ಮಾಡಿಸುವ ಮೊದಲು ನನಗೆ ಬೆಳ್ಳಂದೂರು ಕೆರೆಯ ಪರಿಸ್ಥಿತಿ ತಿಳಿದಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಅತ್ಯಂತ ಅಪಾಯಕಾರಿ ಸ್ಥಳದಲ್ಲಿ ಫೋಟೋಶೂಟ್ ಮಾಡಿಸುವ ಮೂಲಕ ರಶ್ಮಿಕಾ ಮಂದಣ್ಣ ಸುದ್ದಿಯಾಗಿದ್ದು, ಅಬ್ಬಾ.. ಈ ಕೆರೆಯ ಕುರಿತು ಕೇಳಿದರೆ ಭಯವಾಗುತ್ತದೆ. ಕೆರೆ ಇಷ್ಟೊಂದು ಪ್ರಮಾಣದಲ್ಲಿ ಹಾಳಾಗಿದೆ ಎಂದು ನನಗೆ ತಿಳಿದಿರಲಿಲ್ಲ ಎಂದು ಅವರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.