ಶೂನ್ಯ ತ್ಯಾಜ್ಯದೆಡೆಗೆ ರಾಜಧಾನಿಯ ಸಕ್ರಿಯ ಹೆಜ್ಜೆ: ಶಾಸಕ ಎಂ.ಸತೀಶ್ ರೆಡ್ಡಿ
ದೇಶದ ಮೊದಲ ಸ್ವಚ್ಛ ಗೃಹ ಕಲಿಕಾ ಕೇಂದ್ರಕ್ಕೆ ಚಾಲನೆ
ಬೆಂಗಳೂರು, ಡಿ.15: ರಾಜಧಾನಿಯನ್ನು ಶೂನ್ಯ ತ್ಯಾಜ್ಯದೆಡೆಗೆ ಕೊಂಡೊಯ್ಯುವ ಒಂದು ಸಕ್ರಿಯ ಹೆಜ್ಜೆ ಸ್ವಚ್ಛ ಗೃಹ ಕಲಿಕಾ ಕೇಂದ್ರದ ಮೂಲಕ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ದೇಶದ ಗಮನ ಸೆಳೆಯುವಂತಹ ಕಾರ್ಯಕ್ಕೆ ಮುಂದಾಗಿದೆ ಎಂದು ಬೊಮ್ಮನಹಳ್ಳಿ ಶಾಸಕ ಎಂ.ಸತೀಶ್ ರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಎಚ್ಎಸ್ಆರ್ ಬಡಾವಣೆಯ ಉದ್ಯಾನವನದಲ್ಲಿ ದೇಶದಲ್ಲೇ ಮೊದಲ ಸ್ವಚ್ಛ ಗೃಹ ಕಲಿಕಾ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಗರದಲ್ಲಿ ಉತ್ಪತ್ತಿಯಾಗುವ ಶೇ.90 ರಷ್ಟು ಕಸವನ್ನು ನಾವು ಜೈವಿಕ ಗೊಬ್ಬರವನ್ನಾಗಿ ಪರಿವರ್ತಿಸಬಹುದಾಗಿದೆ. 1.5 ಏಕರೆ ಉದ್ಯಾನವನವನ್ನು ಕಲಿಕಾ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ ಎಂದು ತಿಳಿಸಿದರು.
ಇದರಲ್ಲಿ 20 ಕ್ಕೂ ಹೆಚ್ಚು ಗೊಬ್ಬರ ತಯಾರಿಕಾ ಘಟಕಗಳ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲಾಗಿದೆ. ಅಲ್ಲದೆ, ಒಂದು ಜೈವಿಕ ಅನಿಲ ಘಟಕವನ್ನು ಹೊಂದಿದ್ದು, ಎಚ್ಎಸ್ಆರ್ ಸಿಟಿಜನ್ ಫೋರಮ್ ಹಾಗೂ ಸಾಲಿಡ್ ವೇಸ್ಟ್ ಮ್ಯಾನೇಜ್ ಮೆಂಟ್ ರೌಂಡ್ ಟೇಬಲ್ ಅವರ ಸಹಯೋಗದಲ್ಲಿ ಇದನ್ನು ಪ್ರಾರಂಭಿಸಲಾಗಿದೆ. ಇದು ನಗರದ ಹಾಗೂ ದೇಶದಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿರುವ ತ್ಯಾಜ್ಯ ವಿಲೇವಾರಿಗೆ ಉತ್ತರ ನೀಡಲಿದೆ ಎಂದು ಅಭಿಪ್ರಾಯಪಟ್ಟರು.
ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಮಾತನಾಡಿ, ಈ ಕೇಂದ್ರದ ಅಭಿವೃದ್ದಿಗೆ ಬೇಕಾದ ಅಗತ್ಯ ಅನುದಾನವನ್ನು ನೀಡುವುದಾಗಿ ಭರವಸೆ ನೀಡಿದರು.
ಎಚ್ಎಸ್ಆರ್ ಸಿಟಿಜನ್ ಫೋರಂನ ಚಿತ್ರಾ ಪ್ರನೀತ್ ಮಾತನಾಡಿ, 2017 ಡಿಸೆಂಬರ್ನಲ್ಲಿ ಬೊಮ್ಮನಹಳ್ಳಿ ಶಾಸಕರ ಸಹಯೋಗದಲ್ಲಿ ಕಾಂಪೋಸ್ಟಿಂಗ್ಗೆ ಚಾಲನೆ ನೀಡಲಾಗಿತ್ತು. ಈಗ ಇಲ್ಲಿ 10 ಲೇನ್ ಕಾಂಪೋಸ್ಟರ್ಗಳನ್ನು ಅಳವಡಿಸಲಾಗಿದೆ. ಈ ಪ್ರಾತ್ಯಕ್ಷಿಕೆಯ ಮೂಲಕ ಅಪಾರ್ಟ್ಮೆಂಟ್ ನಿವಾಸಿಗಳು ಹಾಗೂ ಜನಸಾಮಾನ್ಯರು ಸುಲಭವಾಗಿ ಕಾಂಪೋಸ್ಟ್ ಮಾಡಬಹುದಾದ ಕ್ರಮಗಳನ್ನು ತಿಳಿಸಿಕೊಡಲಾಗುವುದು ಎಂದರು.
ಕಾರ್ಪೊರೇಟರ್ ಗುರುಮೂರ್ತಿ ರೆಡ್ಡಿ ಮಾತನಾಡಿ, ಕಳೆದ 6 ವರ್ಷಗಳ ಅವಧಿಯಲ್ಲಿ ಎಚ್ಎಸ್ಆರ್ ಲೇಔಟ್ನಲ್ಲಿ ಹಲವಾರು ಕಸ ನಿರ್ವಹಣಾ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡಿದ್ದೇವೆ. ಇದಕ್ಕೆ ಇಲ್ಲಿನ ನಾಗರಿಕರು ಬಹಳಷ್ಟು ಸಹಕಾರ ನೀಡಿದ್ದಾರೆ. ಇದೀಗ ನಮ್ಮ ಕ್ಷೇತ್ರದ ಶಾಸಕರ ಜೊತೆಗೂಡಿ ಸ್ವಚ್ಛ ಗೃಹ ಕಲಿಕಾ ಕೇಂದ್ರ ಪ್ರಾರಂಭಿಸಿರುವುದು ಬಹಳ ಸಂತಸದ ವಿಷಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅದಮ್ಯ ಚೇತನ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್, ಬೊಮ್ಮನಹಳ್ಳಿ ಕಾರ್ಪೊರೇಟರ್ ರಾಮ್ ಮೋಹನ ರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪಾರ್ಕಿಗೆ ಇತ್ತೀಚೆಗೆ ನಮ್ಮನ್ನು ಅಗಲಿದ ಕೇಂದ್ರ ಸಚಿವ ಎಚ್.ಎನ್ ಅನಂತಕುಮಾರ್ ಅವರ ಹೆಸರನ್ನು ನಾಮಕರಣ ಮಾಡುವ ಮೂಲಕ ಗೌರವವನ್ನು ಸಮರ್ಪಿಸಲಾಗಿದೆ. ಈ ಸ್ವಚ್ಛ ಗೃಹ ಕಲಿಕಾ ಕೇಂದ್ರಕ್ಕೆ ಸಾರ್ವಜನಿಕರು ಭೇಟಿ ನೀಡಬಹುದಾಗಿದೆ. ಈ ಮೂಲಕ ಗೃಹ ಗೊಬ್ಬರ ತಯಾರಿಕಾ ವಿಧಾನ, ಸಮುದಾಯ ಗೊಬ್ಬರ ತಯಾರಿಕೆ, ಎಲೆ ಗೊಬ್ಬರ ತಯಾರಿಕಾ ಕ್ರಮ, ಕಿಚನ್ ಗಾರ್ಡನ್, ಜೈವಿಕ ಅನಿಲ ಉತ್ಪಾದನಾ ವಿಧಾನ, ಜೀರೋ ವೇಸ್ಟ್ ಹೋಮ್ ಹಾಗೂ ತ್ಯಾಜ್ಯ ವಸ್ತುಗಳ ಪುನರ್ ಬಳಕೆಯ ವಿಧಾನಗಳನ್ನು ಕಲಿಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂ:98800 38525 ಅನ್ನು ಸಂಪರ್ಕಿಸಬಹುದು.