ಪ್ರವಾಸದಿಂದ ವೈವಿಧ್ಯತೆ ಅರಿಯಬಹುದು: ಲೇಖಕ ಗುರುರಾಜ ಕರಜಗಿ
ಬೆಂಗಳೂರು, ಡಿ.16: ಪ್ರವಾಸದಲ್ಲಿ ಸಾಹಿತ್ಯ, ಸಂಸ್ಕೃತಿ, ಪರಂಪರೆ, ವೈವಿಧ್ಯತೆ ಮತ್ತು ಇತಿಹಾಸ ಅರಿಯಬಹುದು ಎಂದು ಲೇಖಕ ಗುರುರಾಜ ಕರಜಗಿ ಅಭಿಪ್ರಾಯಪಟ್ಟರು.
ರವಿವಾರ ನಗರದ ಬೀಚಿ ಪ್ರಕಾಶನ ಹಾಗೂ ಕೊರವಂಜಿ ಟ್ರಸ್ಟ್ ಆಯೋಜಿಸಿದ್ದ, ನಿವೃತ್ತ ಡಿಜಿಪಿ ಡಾ.ಡಿ.ವಿ.ಗುರುಪ್ರಸಾದ್ ಅವರು ರಚಿಸಿದ ವಿಶ್ವ ಪರ್ಯಟನೆ (ಮೂರು ಲೇಖನಗಳಲ್ಲಿ ಒಂದು) ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಪ್ರವಾಸದಿಂದ ಇಡೀ ಪ್ರಾದೇಶಿಕ ವೈವಿಧ್ಯತೆಯೇ ತಿಳಿಯುತ್ತದೆ. ಅಲ್ಲದೆ, ಒಂದು ಕ್ಷೇತ್ರ ಅಥವಾ ವಸ್ತುವಿನ ಕುರಿತು ಸಾಮಾನ್ಯರಂತೆ ಲೇಖಕರು ಯೋಚಿಸುವುದಿಲ್ಲ ಎಂದು ತಿಳಿಸಿದರು.
ಲೇಖನಗಳನ್ನು ಓದುವಾಗ ರಸ ಸೃಷ್ಟಿ, ಜೀವನ ದರ್ಶನ ಕಾಣಬೇಕು. ಪುಸ್ತಕ ಓದುವಾಗ ಅಬ್ಬಾ... ಎಷ್ಟು ಅದ್ಭುತವಾಗಿದೆ ಅನ್ನುವಂತಿರಬೇಕು. ಇನ್ನೊಂದು, ಜಗತ್ತು ಸುತ್ತಿ ಅದನ್ನು ಪ್ರೇಕ್ಷಕರಿಗೆ ಮನಮುಟ್ಟುವಂತೆ ತಿಳಿಸುವುದು. ಮತ್ತೊಂದು, ಪುಸ್ತಕ ಓದುವಾಗ ಇದು ನಮ್ಮ ಜೀವನವಿದ್ದಂತಿದೆ ಎಂಬುವಷ್ಟರ ಮಟ್ಟಿಗೆ ಪರಿವರ್ತನೆ ಆಗಬೇಕು ಎಂದು ವಿವರಿಸಿದರು.
ಪೊಲೀಸ್ ಜೀವನದಲ್ಲಿ ಹಾಸ್ಯ ಕೃತಿ ಬಿಡಗುಡೆ ಮಾಡಿದ ಲೇಖಕಿ ಭುವನೇಶ್ವರಿ ಹೆಗಡೆ, ಜೀವನದ ಪ್ರತಿಯೊಬ್ಬರು ಹಾಸ್ಯ ರೂಢಿಸಿಕೊಳ್ಳಬೇಕು. ಆದರೆ, ವಿಶೇಷವಾಗಿ ಪೊಲೀಸರು ಹಾಸ್ಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಆಗ ಸಾರ್ವಜನಿಕರಿಗೂ ನೆಮ್ಮದಿ ಸಿಗುತ್ತದೆ ಎಂದರು.