ಬೆಂಗಳೂರು: ಡಿ.20 ರಿಂದ ಅಂಧರ ಕ್ರಿಕೆಟ್ ಲೀಗ್
ಬೆಂಗಳೂರು, ಡಿ.18: ಐಡಿಎಲ್ ಫೌಂಡೇಷನ್ ಹಾಗೂ ಕರ್ನಾಟಕ ಅಂಧ ಕ್ರೀಡಾಪಟುಗಳ ಸಂಘದ ಸಹಯೋಗದಲ್ಲಿ ನಟ ಅಂಬರೀಶ್ ಸ್ಮರಣಾರ್ಥ ಡಿ.20 ರಂದು ಹೊನಲು ಬೆಳಕಿನ ಅಂದರ ಕ್ರಿಕೆಟ್ ಲೀಗ್ ‘ಅಂಬಿ ಕಪ್-2018’ ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಡಿಎಲ್ ಫೌಂಡೇಶನ್ ಮುಖ್ಯಸ್ಥ ಡಾ.ಪಿ.ಕೆ.ಪೌಲ್, ಕಳೆದ ಐದು ವರ್ಷಗಳಿಂದ ಅಂಧ ಕ್ರಿಕೆಟ್ ಪಂದ್ಯಾವಳಿಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ಈ ಬಾರಿ ವಿಶೇಷವಾಗಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲಾಗಿದೆ. ಆರು ದಿನಗಳ ಕಾಲ ನಡೆಯಲಿದ್ದು, ಡಿ.20 ರಂದು 7 ಗಂಟೆಗೆ ನಗರದ ಮತ್ತಿಕೆರೆ ಬಿಬಿಎಂಪಿ ಮೈದಾನದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದರು.
ಅಂಧರ ಕ್ರಿಕೆಟ್ ಪಂದ್ಯಾವಳಿಯಲ್ಲಿ ದೇಶದ ವಿವಿಧ ಭಾಗಗಳ ಪುರುಷ, ಮಹಿಳಾ ಹಾಗೂ ವಿದ್ಯಾರ್ಥಿಗಳು ಸೇರಿದಂತೆ 400ಕ್ಕೂ ಹೆಚ್ಚು ಅಂಧ ಕ್ರಿಕೆಟ್ ಆಟಗಾರರು ಭಾಗವಹಿಸುತ್ತಿದ್ದಾರೆ. ಪಂದ್ಯವನ್ನು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಉದ್ಘಾಟಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ನಮ್ಮ ಸಂಸ್ಥೆಗೆ ನಟ ಅಂಬರೀಶ್ ಅವರು ಅನೇಕ ಬಾರಿ ನೆರವು ನೀಡಿದ್ದರು. ಅವರ ಸ್ಮರಣಾರ್ಥ ಈ ಬಾರಿ ‘ಅಂಬಿ ಕಪ್’ ಎಂದು ಹೆಸರಿಡಲಾಗಿದೆ. ಅಂಧರ ಕ್ರಿಕೆಟ್ ಹಣಕಾಸಿನ ನೆರವು ಅಗತ್ಯವಿದ್ದು, ಧಾನಿಗಳು ಹಾಗೂ ಕಾರ್ಪೊರೇಟ್ ಸಂಸ್ಥೆಗಳು ನೆರವು ನೀಡಬೇಕು ಎಂದು ವಿನಂತಿಸಿದರು. ಮಾಹಿತಿಗಾಗಿ 9740288077 ಸಂಪರ್ಕಿಸಲು ಕೋರಿದರು.