ಅಪ್ಪಂದಿರಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಶಾಸಕರ ಪುತ್ರಿಯರು ಅಸಮಾಧಾನ
ಬೆಂಗಳೂರು, ಡಿ.22: ಅಪ್ಪಂದಿರಿಗೆ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಶಾಸಕರ ಪುತ್ರಿಯರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ಹೊರಹಾಕಿದ್ದಾರೆ.
ಬಿಟಿಎಂ ಲೇಔಟ್ ಕ್ಷೇತ್ರದ ಶಾಸಕ ರಾಮಲಿಂಗಾರೆಡ್ಡಿ ಮಗಳು ಶಾಸಕಿ ಸೌಮ್ಯಾ ರೆಡ್ಡಿ, ಟ್ವೀಟ್ ಮೂಲಕ ಅಸಮಾಧಾನ ಹೊರ ಹಾಕಿದ್ದು, ನನ್ನ ತಂದೆ ಎರಡು ಬಾರಿ ಡಿಸಿಸಿ ಅಧ್ಯಕ್ಷರಾಗಿದ್ದವರು. 7 ಬಾರಿ ಶಾಸಕರಾಗಿ ಬೆಂಗಳೂರಿನಲ್ಲಿ ಪಕ್ಷಕ್ಕಾಗಿ ಬಹಳ ದುಡಿದಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡದೆ ಇರುವುದು ಬೇಸರ ತಂದಿದೆ. ಈ ಕ್ರಮ ಪಕ್ಷ ನಿಷ್ಠರಿಗೆ ಹಿಂದೇಟಾಗಿದೆ ಎಂದಿದ್ದಾರೆ.
ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಅವರ ಪುತ್ರಿ ಸೃಷ್ಟಿ ಅಸಮಾಧಾನ ಹೊರಹಾಕಿದ್ದು, ಕಾಂಗ್ರೆಸ್ ಹೈಕಮಾಂಡ್ ಅವರ ಈ ಕ್ರಮದಿಂದ ನನ್ನ ತಂದೆಗೆ ಅನ್ಯಾಯವಾಗಿದೆ. ಹಿರೇಕೆರೂರು-ರಟ್ಟೇಹಳ್ಳಿ ತಾಲೂಕಿನ ಜನರಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ಹೇಳಿದ್ದಾರೆ.
ನನ್ನ ತಂದೆ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪಕ್ಷ ನಿಷ್ಠೆ ಮೆರೆದಿದ್ದಾರೆ. ಅಷ್ಟೇ ಅಲ್ಲದೇ ಹಾವೇರಿ ಜಿಲ್ಲೆಯ ಏಕೈಕ ನಾಯಕರೆನಿಸಿದ್ದಾರೆ. ಕಳೆದ 38 ವರ್ಷಗಳಿಂದ ಹಿರೇಕೆರೂರಿಗೆ ಒಂದೇ ಒಂದು ಸಚಿವ ಸ್ಥಾನವೂ ಸಿಕ್ಕಿಲ್ಲ ಎಂದು ಆರೋಪಿಸಿದರು.