ಜ.3: 'ಇಂಗ್ಲಿಷ್ ಕಲಿಕೆ ಅಂದು-ಇಂದು' ರಾಜ್ಯ ಮಟ್ಟದ ವಿಚಾರ ಸಂಕಿರಣ
ಬೆಂಗಳೂರು, ಡಿ.29: ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ ಪ್ರಯುಕ್ತ ‘ಇಂಗ್ಲಿಷ್ ಕಲಿಕೆ ಅಂದು-ಇಂದು’ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಜ.3ರಂದು ಬೆಳಗ್ಗೆ 11 ಗಂಟೆಗೆ ನಗರದ ಗಾಂಧಿಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಸಂಸದ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ‘ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಕೆಯ ಒಂದು ದಶಕದ ಅವಲೋಕನ’ ವಿಚಾರ ಸಂಕಿರಣವನ್ನು ಜೆಡಿಎಸ್ ಅಧ್ಯಕ್ಷ ಎಚ್.ವಿಶ್ವನಾಥ್ ಉದ್ಘಾಟಿಸಲಿದ್ದು, ಡಾ.ನಟರಾಜ್ ಹುಳಿಯಾರ್ ಆಶಯ ಭಾಷಣವನ್ನು ಹಾಗೂ ಕವಿಯತ್ರಿ ಡಾ.ಕೆ.ಶರೀಫಾ ‘ಸಾವಿತ್ರಿ ಬಾಯಿ ಫುಲೆ ಆಧುನಿಕ ಭಾರತದ ದಾರಿದೀಪ’ ಉಪನ್ಯಾಸವನ್ನು ಮಾಡಲಿದ್ದಾರೆ ಎಂದು ತಿಳಿಸಿದರು.
ಶಿಕ್ಷಣ ತಜ್ಞ ಡಾ.ವಿ.ಬಿ.ತಾರಕೇಶ್ವರ್, ಉಪನ್ಯಾಸಕರಾದ ಡಾ.ಕೆ.ಪಿ.ನಾರಾಯಣಪ್ಪ ಹಾಗೂ ಡಾ.ಪ್ರದೀಪ್ ರಮಾವತ್ ‘ಇಂಗ್ಲಿಷ್ ಭಾಷೆ ಹಾಗೂ ಮಾಧ್ಯಮ ಗ್ರಾಮೀಣ ಸವಾಲುಗಳು, ಸಾಧ್ಯತೆಗಳು’ ಕುರಿತು ವಿಚಾರ ಗೋಷ್ಠಿಯಲ್ಲಿ ವಿಷಯ ಮಂಡನೆ ಮಾಡಲಿದ್ದಾರೆ. ಹಾಗೂ ‘ನಮ್ಮೂರ ಸರಕಾರಿ ಶಾಲೆಗಳ ಸ್ಥಿತಿ-ಗತಿಯ’ ಸಂವಾದ ಗೋಷ್ಠಿಯನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.