ಪಾಪು ಕನ್ನಡಿಗರ ಸಾಕ್ಷಿ ಪ್ರಜ್ಞೆ: ಸಚಿವ ನಾಡಗೌಡ
ಬೆಂಗಳೂರು, ಜ. 11: ಗಾಂಧೀವಾದಿ ನಾಡೋಜ ಪಾಟೀಲ ಪುಟ್ಟಪ್ಪ ಕನ್ನಡಿಗರ ಸಾಕ್ಷಿ ಪ್ರಜ್ಞೆ ಎಂದು ಪಶು ಸಂಗೋಪನೆ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ.
ನಗರದ ಗಾಂಧೀ ಭವನದಲ್ಲಿ ಪಾಟೀಲ ಪುಟ್ಟಪ್ಪ ಜನ್ಮ ಶತಮಾನೋತ್ಸವ ಸಮಿತಿ, ಬಸವ ಸಮಿತಿ ಮತ್ತು ಗಾಂಧೀ ಸ್ಮಾರಕ ನಿಧಿ ವತಿಯಿಂದ ಏರ್ಪಡಿಸಿದ್ದ ನಾಡೋಜ ಡಾ.ಪಾಟೀಲ್ ಪುಟ್ಟಪ್ಪ ಜನ್ಮಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸ್ವಾಭಿಮಾನ, ಭಾಷಾಭಿಮಾನ, ದೇಶಾಭಿಮಾನಕ್ಕೆ ಮಾದರಿ ನಾಡೋಜ ಪಾಟೀಲ್ ಪುಟ್ಟಪ್ಪ. ರಾಜ್ಯ ಸರಕಾರದ ವ್ಯವಹಾರಗಳು ಕನ್ನಡದಲ್ಲಿ ನಡೆಯಲು ಪಾಟೀಲ್ ಪುಟ್ಟಪ್ಪ ಪಾತ್ರ ಅಪಾರವಾದುದು. ಅವರು, ಕನ್ನಡ ನಾಡಿನ ಸಾಕ್ಷಿ ಪ್ರಜ್ಞೆಯಾಗಿದ್ದಾರೆ ಎಂದು ಬಣ್ಣಿಸಿದರು.
ಪತ್ರಿಕೋದ್ಯಮದ ಭೀಷ್ಮರೆಂದೇ ಖ್ಯಾತರಾಗಿರುವ ಪಾಟೀಲ್ ಪುಟ್ಟಪ್ಪಅವರದ್ದು ಅಸಾಮಾನ್ಯ ಪ್ರತಿಭೆ. ರಾಜಕೀಯ ಕ್ಷೇತ್ರದಲ್ಲಿ, ಸ್ವಾತಂತ್ರ ಹೋರಾಟದಲ್ಲಿ ತಮ್ಮದೇ ಛಾಪು ಮೂಡಿಸಿರುವ ಗಾಂಧೀ ಸ್ಪರ್ಶಿಸಿದ ಬಾಲಕ. ಕ್ಯಾಲಿಫೋರ್ನಿಯಾ ವಿವಿಯಿಂದ ಪತ್ರಿಕೋದ್ಯಮ ಪದವಿ ಪಡೆದ ಪುಟ್ಟಪ್ಪಸಾಂಕ ವ್ಯವಸ್ಥೆಯಲ್ಲಿ ಅತಿಯಾದ ನಂಬಿಕೆ. ಬಾಂಬೆ ಕ್ರಾನಿಕಲ್ ಪತ್ರಿಕೆಯಿಂದ ತಮ್ಮ ಪತ್ರಕರ್ತ ವೃತ್ತಿ ಆರಂಭಿಸಿ ನಿಷ್ಠೂರವಾದ ವರದಿಗಳಿಂದ ಪ್ರಖ್ಯಾತಿ ಹೊಂದಿದವರು ಎಂದು ಶ್ಲಾಘಿಸಿದರು.
ಪಾಟೀಲ್ ಅವರ ನಿಷ್ಠೂರ ಬರಹಗಳು ವ್ಯವಸ್ಥೆಯ ಲೋಪದೋಷಗಳನ್ನು ಸರಿಪಡಿಸಿವೆ. ತೀಕ್ಷ್ಣ ಸ್ವರೂಪದ ಬರವಣಿಗೆ ಹಾಗೂ ಸತ್ಯ ಪತ್ರಿಕೋದ್ಯಮಕ್ಕೆ ಅತ್ಯಗತ್ಯ ಎನ್ನುವುದನ್ನು ತೋರಿಸಿಕೊಟ್ಟರು. ಪುಟ್ಟಪ್ಪಅವರು ಎಲ್ಲ ಕ್ಷೇತ್ರಗಳಲ್ಲಿ ಪಾರಮ್ಯ ಸಾಧಿಸಿದ ಮಹಾನ್ ಸಾಧಕ ಎಂದರು.
ಪುಟ್ಟಪ್ಪಗೆ ಜ.14ಕ್ಕೆ ನೂರು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಶತಮಾನೋತ್ಸವ ಸಮಾರಂಭ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಹಲವು ಜನರು ಅವರಿಗೆ ಶಾಲು ಹೊದಿಸಿ ಅಭಿನಂದನೆ ಸಲ್ಲಿಸಿದರು. ಸಮಾರಂಭದಲ್ಲಿ ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ, ಅರವಿಂದ ಜತ್ತಿ, ಗಾಂಧೀ ಸ್ಮಾರಕ ನಿಧಿ ಅಧ್ಯಕ್ಷ ವೂಡೆ ಪಿ. ಕೃಷ್ಣ, ಬಿ.ಎಲ್. ಶಂಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.