ಪೀಸ್ ಆಫ್ ಹ್ಯುಮಾನಿಟಿ ವತಿಯಿಂದ ಮಾದಕ ವಸ್ತುಗಳ ವ್ಯಸನ ಕುರಿತ ಜಾಗೃತಿ ಸಮಾವೇಶ
ಬೆಂಗಳೂರು, ಜ.12: ಮಾದಕ ದ್ರವ್ಯ ಸೇವನೆಯಿಂದ ಭವಿಷ್ಯಕ್ಕೆ ಮಾರಕವಾಗುತ್ತಿದೆ. ಹೀಗಾಗಿ ಮಾದಕ ದ್ರವ್ಯ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎಂದು ಪೀಸ್ ಆಫ್ ಹ್ಯುಮಾನಿಟಿ ಪ್ರಧಾನ ಸಂಚಾಲಕ ನೌಶಾದ್ ತಿಳಿಸಿದರು.
ಶನಿವಾರ ನಗರದ ಕ್ವೀನ್ಸ್ ರಸ್ತೆಯ ದಾರುಸ್ಸಾಲಂ ಕಟ್ಟಡದಲ್ಲಿ ಪೀಸ್ ಆಫ್ ಹ್ಯುಮಾನಿಟಿ ಆಯೋಜಿಸಿದ್ದ, ಮಾದಕ ವಸ್ತುಗಳ ವ್ಯಸನ ಕುರಿತ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಾನವ ಜನ್ಮ ಅಮೂಲ್ಯವಾದುದ್ದು, ಕುಡಿತ, ಮಾದಕ ಸೇವನೆ, ಗುಟ್ಕಾ, ಸಿಗರೇಟ್ ಇತ್ಯಾದಿ ಸೇವೆನೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹಾಳು ಮಾಡಿಕೊಂಡು ಸಮಾಜಕ್ಕೆ ಕಂಟಕವಾಗಬೇಡಿ ಎಂದರು. ಮಾದಕ ವಸ್ತುಗಳ ಬಳಕೆ ತಡೆಗಟ್ಟುವುದು ನಮ್ಮ ಮೊದಲ ಆದ್ಯತೆ. ಮಕ್ಕಳು, ಯುವಕರು ಹಾಗೂ ಸಮುದಾಯಗಳಲ್ಲಿ ವಾಸಿಸುವ ಕುಟುಂಬಗಳ ಯೋಗಕ್ಷೇಮ ಆಧಾರವಾಗಿಟ್ಟುಕೊಂಡು ತಿಳಿವಳಿಕೆ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಸರ್ವಧರ್ಮ ಭಾಗಿ: ಮಾದಕ ದ್ರವ್ಯ ವ್ಯಸನ ಕುರಿತು ಪೋಷಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಸರ್ವಧರ್ಮದ ಮುಖಂಡರು ಪಾಲ್ಗೊಂಡಿದ್ದರು. ಶಕ್ತಿದೇವಿ ದೇವಾಲಯದ ಮುಖ್ಯ ಅರ್ಚಕ ಷಣ್ಮುಗಸ್ವಾಮಿ, ಸಿಖ್ ಸಮುದಾಯದ ಸುಖ್ದೇವ್ ಸಿಂಗ್, ಅಮೃತಾ ಕೌರ್, ಹಾಬೀಬ್ ಸಿದ್ದೀಕಿ ಸೇರಿದಂತೆ ಪ್ರಮುಖರಿದ್ದರು.