‘ಆಪರೇಷನ್ ಕಮಲ’ ಭೀತಿ: ಜ.15 ರಂದು ಸಚಿವ ಡಿಕೆಶಿ ಮುಂಬೈಗೆ ಪ್ರಯಾಣ
ಬೆಂಗಳೂರು, ಜ. 14: ಮೂರು ಮಂದಿ ಶಾಸಕರು ಮುಂಬೈನಲ್ಲಿದ್ದಾರೆಂದು ಹೇಳಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ನಾಳೆ(ಜ.15) ಸಂಜೆ 4:55ಕ್ಕೆ ವಿಶೇಷ ವಿಮಾನದಲ್ಲಿ ಮುಂಬೈಗೆ ಪ್ರಯಾಣ ಬೆಳೆಸಲಿದ್ದು, ‘ಆಪರೇಷನ್ ಕಮಲ’ದ ಭೀತಿಗೆ ಪುಷ್ಟಿ ನೀಡುವಂತಿದೆ.
ಕಾಂಗ್ರೆಸ್ ಪಕ್ಷದ ಗೋಕಾಕ್ ಕ್ಷೇತ್ರದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹಾಗೂ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಮುಂಬೈನಲ್ಲಿ ಬೀಡುಬಿಟ್ಟಿದ್ದು, ಮೂರು ಮಂದಿ ಬಿಜೆಪಿ ಮುಖಂಡರ ಸಂಪರ್ಕದಲಿದ್ದಾರೆಂದು ಹೇಳಲಾಗಿದೆ.
ಆ ಹಿನ್ನೆಲೆಯಲ್ಲಿ ಅವರನ್ನು ಮನವೊಲಿಸಿ ಕರೆತರಲು ಡಿ.ಕೆ.ಶಿವಕುಮಾರ್ ತೆರಳುತ್ತಿದ್ದು ರಾಜಕೀಯ ಕುತೂಹಲ ಮೂಡಿಸಿದೆ. ಮುಂಬೈನಲ್ಲಿರುವ ಮೂವರು ಶಾಸಕರು ಎಲ್ಲಿ ಉಳಿದುಕೊಂಡಿದ್ದಾರೆಂಬ ಮಾಹಿತಿಯೂ ನನಗಿದೆ ಎಂದು ನಿನ್ನೆ ಹೇಳಿದ್ದರು. ಅಲ್ಲದೆ, ಆ ಮೂರು ಮಂದಿ ಶಾಸಕರ ಚಲನವಲನಗಳ ಮೇಲೆ ಡಿ.ಕೆ. ಶಿವಕುಮಾರ್ ನಿಗಾ ವಹಿಸಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಿವಕುಮಾರ್ ಅವರ ಹೆಗಲಿಗೆ ಮತ್ತೊಮ್ಮೆ ಅತೃಪ್ತರ ಮನವೊಲಿಕೆ ಜವಾಬ್ದಾರಿಯನ್ನು ಕಾಂಗ್ರೆಸ್ ಹೈಕಮಾಂಡ್ ನೀಡಿದೆ ಎಂದು ಗೊತ್ತಾಗಿದೆ.
ಮಹಾರಾಷ್ಟ್ರದ ಔರಂಗಬಾದ್ನಲ್ಲಿ ಜಲಸಂಪನ್ಮೂಲ ಇಲಾಖೆಯ ಎರಡು ದಿನಗಳ ಅಧಿಕೃತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಚಿವ ಡಿ.ಕೆ.ಶಿವಕುಮಾರ್ ತೆರಳುತ್ತಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ಅಧಿಕೃತ ಕಾರ್ಯಕ್ರಮದ ಜೊತೆಗೆ ಆಪರೇಷನ್ ಕಮಲವನ್ನು ವಿಫಲಗೊಳಿಸುವ ಹೊಣೆಯನ್ನು ಹೈಕಮಾಂಡ್ ಡಿ.ಕೆ. ಶಿವಕುಮಾರ್ ನೀಡಿದೆ ಎಂದು ಹೇಳಲಾಗುತ್ತಿದೆ.