ಹೊಂಡ ಭರ್ತಿ ಸಮಸ್ಯೆ ಹಿನ್ನೆಲೆ: ಬೆಳ್ಳಹಳ್ಳಿ ಮಾದರಿಯಲ್ಲೇ 2 ಕಲ್ಲುಗಣಿ ಹೊಂಡಕ್ಕೆ ಬಿಬಿಎಂಪಿ ಪ್ರಸ್ತಾವನೆ
ಬೆಂಗಳೂರು, ಜ.15: ಬೃಹತ್ ಬೆಂಗಳೂರು ಮಹಾನಗರದ ಪಾಲಿಕೆ, ಬೆಳ್ಳಹಳ್ಳಿ ಮಾದರಿಯಲ್ಲಿಯೇ ಮತ್ತೆರಡು ಕಲ್ಲುಗಣಿ ಹೊಂಡಗಳನ್ನು ಗುರುತಿಸಲಾಗಿದ್ದು, ಕಸ ವಿಲೇವಾರಿ ಅನುಮತಿ ನೀಡುವಂತೆ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ. ಮಿಶ್ರತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿರುವ ಬೆಳ್ಳಹಳ್ಳಿ ಕಲ್ಲುಗಣಿ ಹೊಂಡ ಭರ್ತಿ ನಂತರ ಎದುರಾಗುವ ಸಮಸ್ಯೆಯಿಂದ ಪಾರಾಗಲು ಪರಿಹಾರ ಕಂಡುಕೊಂಡಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತ್ಯಾಜ್ಯ ಸಮಸ್ಯೆ ನಿವಾರಣೆಗೆ ಸಂಬಂಧಿಸಿದಂತೆ ಬಿಬಿಎಂಪಿ 7 ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿದ್ದು, 5 ಘಟಕಗಳು ಕಾರ್ಯ ನಿರ್ವಹಿಸುವಂತಿಲ್ಲ. ಅದರ ಜತೆಗೆ ಮಿಶ್ರ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದ್ದ ಮಿಟ್ಟಗಾನಹಳ್ಳಿ ಕಲ್ಲು ಗಣಿ ಹೊಂಡ ಭರ್ತಿಯಾಗಿದ್ದು, ಅಲ್ಲಿ ಉದ್ಯಾನ ನಿರ್ಮಿಸಲಾಗಿದೆ. ಅದರ ಜತೆಗೆ ಬೆಳ್ಳಹಳ್ಳಿ ಹೊಂಡ ಶೇ.90 ರಷ್ಟು ಭರ್ತಿಯಾಗಿದ್ದು ಇನ್ನೆರಡು ತಿಂಗಳಲ್ಲಿ ಪೂರ್ಣ ತುಂಬಲಿದೆ.
ಈ ಹಿನ್ನೆಲೆಯಲ್ಲಿ ಮಿಶ್ರ ತ್ಯಾಜ್ಯ ವಿಲೇವಾರಿ ಮಾಡಲು ಹೊಸದಾಗಿ ಎರಡು ಗಣಿ ಹೊಂಡ ಗುರುತಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರಕಾರದ ಅನುಮೋದನೆ ನಂತರ ಅಲ್ಲಿ ತ್ಯಾಜ್ಯ ವಿಲೇವಾರಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
22 ಎಕರೆ ಗಣಿ ಹೊಂಡದ ಗುರುತು: ಆನೇಕಲ್ ಬಳಿಯ ಹುಲ್ಲಹಳ್ಳಿ ಮತ್ತು ನೆಲಮಂಗಲ ಬಳಿ ಮಾರೇನಹಳ್ಳಿ ಬಿಬಿಎಂಪಿ ಅಧಿಕಾರಿಗಳು ಜಾಗ ಗುರುತಿಸಿದ್ದಾರೆ. ಅದರಂತೆ ಹುಲ್ಲಹಳ್ಳಿಯಲ್ಲಿ 10 ಎಕರೆ ಮತ್ತು ಮಾರೇನಹಳ್ಳಿಯಲ್ಲಿ 12 ಎಕರೆ ಸ್ಥಗಿತವಾಗಿರುವ ಕಲ್ಲು ಗಣಿಗಾರಿಕೆ ಜಾಗವಿದೆ. ಅಲ್ಲಿ ತ್ಯಾಜ್ಯ ವಿಲೇವಾರಿಗೆ ನಿರ್ಧರಿಸಲಾಗಿದೆ.
ದುರ್ವಾಸನೆ ತಡೆಗೆ ಕ್ರಮ: ಬಿಬಿಎಂಪಿ ಗುರುತಿಸಿರುವ ಗಣಿಹೊಂಡದಲ್ಲಿ ಮಿಶ್ರ ತ್ಯಾಜ್ಯ ವಿಲೇವಾರಿ ಮಾಡಲು ಇನ್ನೆರಡು ತಿಂಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಜೊತೆಗೆ ತ್ಯಾಜ್ಯ ವಿಲೇವಾರಿ ನಂತರ ದುರ್ವಾಸನೆ ಬರದಂತೆ ತಡೆಯಬೇಕಿದೆ.
ಈ ಎಲ್ಲ ಕ್ರಮ ಕೈಗೊಳ್ಳಲು ಕನಿಷ್ಠ 2 ತಿಂಗಳು ಬೇಕಿದೆ. ಅದರೊಂದಿಗೆ ಬೆಳ್ಳಹಳ್ಳಿ ಹೊಂಡ ಇನ್ನೆರಡು ತಿಂಗಳೊಳಗಾಗಿ ಭರ್ತಿಯಾಗಲಿದ್ದು, ಅಷ್ಟರೊಳಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಈ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದ್ದು, ಶೀಘ್ರದಲ್ಲಿ ಅನುಮತಿ ನೀಡುವಂತೆ ಬಿಬಿಎಂಪಿ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ತ್ಯಾಜ್ಯದಿಂದ ವಿದ್ಯುತ್: ತ್ಯಾಜ್ಯ ನಿರ್ವಹಣೆಗೆ ಅನೇಕ ಯೋಜನೆಗಳನ್ನು ಬಿಬಿಎಂಪಿ ರೂಪಿಸಿದ್ದರೂ, ತ್ಯಾಜ್ಯ ಸಮಸ್ಯೆ ನಿವಾರಿಸಲು ಸಾಧ್ಯವಾಗಿಲ್ಲ. ಇದೀಗ ಬಿಬಿಎಂಪಿ ನಿರ್ಮಿಸಿರುವ 9 ಸಂಸ್ಕರಣಾ ಘಟಕಗಳನ್ನು ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕವನ್ನಾಗಿ ಪರಿವರ್ತಿಸಲು ಯೋಜನೆ ರೂಪಿಸಲಾಗುತ್ತಿದೆ. ಅದರಂತೆ ಈಗಾಗಲೇ ಮೂರು ಘಟಕಗಳ ಪರಿವರ್ತನೆಗೆ ಖಾಸಗಿ ಸಂಸ್ಥೆಯನ್ನು ಗುರುತಿಸಲಾಗಿದೆ.
ಮಿಶ್ರತ್ಯಾಜ್ಯ ವಿಲೇವಾರಿಗಾಗಿ ಕಲ್ಲು ಗಣಿಗಾರಿಕೆ ನಡೆಸಿದ ಹೊಂಡಗಳನ್ನು ಎರಡು ಕಡೆ ಗುರುತಿಸಲಾಗಿದೆ. ಅಲ್ಲಿ ತ್ಯಾಜ್ಯ ಹಾಕಲು ಅನುಮತಿ ಕೋರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರಕಾರದಿಂದ ಅನುಮೋದನೆ ದೊರೆತ ನಂತರ ತ್ಯಾಜ್ಯ ವಿಲೇವಾರಿಗೆ ಬೇಕಾದ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಅಪರ ಆಯುಕ್ತ ರಂದೀಪ್ ತಿಳಿಸಿದ್ದಾರೆ.
ತ್ಯಾಜ್ಯ ನಿರ್ವಹಣೆಗೆ ಯೋಜನೆ
* ತ್ಯಾಜ್ಯ ಸಂಗ್ರಹಕ್ಕಾಗಿ 4,213 ಆಟೋ ಟಿಪ್ಪರ್
* 566 ಕಾಂಪ್ಯಾಕ್ಟರ್
* 8 ರಸ್ತೆ ಗುಡಿಸುವ ಯಂತ್ರ
* 18,500 ಪೌರಕಾರ್ಮಿಕರು
* 166 ಒಣತ್ಯಾಜ್ಯ ಸಂಗ್ರಹ ಘಟಕಗಳು
* 11 ಬಯೋಮಿಥನೈಸೇಷನ್ ಘಟಕಗಳು
* 8 ಬೃಹತ್ ತ್ಯಾಜ್ಯ ಸಂಸ್ಕರಣಾ ಘಟಕಗಳು