ಅಮಿತ್ ಶಾ, ಯಡಿಯೂರಪ್ಪ ತಲೆದಂಡ ನಿಶ್ಚಿತ: ಗೃಹ ಸಚಿವ ಎಂ.ಬಿ ಪಾಟೀಲ್
"ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಬೆತ್ತಲಾಗಿದೆ"
ಬೆಂಗಳೂರು, ಜ. 16: ಆಪರೇಷನ್ ಕಮಲ ಸಂಪೂರ್ಣ ವಿಫಲವಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಬೆತ್ತಲಾಗಿದೆ. ಆಪರೇಷನ್ ಕಮಲಕ್ಕೆ ಕುಮ್ಮಕ್ಕು ನೀಡಿದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಲೆದಂಡ ನಿಶ್ಚಿತ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಭವಿಷ್ಯ ನುಡಿದಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬಿಜೆಪಿ ಮುಖಂಡರಿಗೆ ಕನಿಷ್ಠ ಮಾನ-ಮಾರ್ಯಾದೆ ಇದ್ದರೆ ಇನ್ನೆಂದೂ ಆಪರೇಷನ್ ಕಮಲಕ್ಕೆ ಮತ್ತೊಮ್ಮೆ ಕೈ ಹಾಕಬಾರದು. ನಮ್ಮ ಪಕ್ಷದ ಎಲ್ಲ ಶಾಸಕರು ನವ್ಮೊಂದಿಗೆ ಇದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಯಾವುದೇ ಶಾಸಕರು ಬಿಜೆಪಿ ಹೋಗುವುದಿಲ್ಲ. ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಮತ್ತಷ್ಟು ಸುಭದ್ರವಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದ ಅವರು, ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಶಾಸಕ ನಾಗೇಂದ್ರ ನನ್ನ ಸ್ನೇಹಿತರು. ನಿನ್ನೆ ರಾತ್ರಿ ಮತ್ತು ಇಂದು ಬೆಳಗ್ಗೆಯೂ ನಾನು ಅವರ ಜೊತೆ ಮೊಬೈಲ್ ಫೋನ್ನಲ್ಲಿ ಮಾತಾಡಿದ್ದೇನೆ. ಪಕ್ಷೇತರ ಶಾಸಕರೂ ನಮ್ಮ ಜೊತೆಯಲ್ಲೆ ಇದ್ದಾರೆ. ಜ.18ರಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಎಲ್ಲರೂ ಪಾಲ್ಗೊಳ್ಳಲಿದ್ದಾರೆ ಎಂದು ಪಾಟೀಲ್ ಸ್ಪಷ್ಟಪಡಿಸಿದರು.