ಬಿಜೆಪಿ ಮಾತಿಗೆ ಮರುಳಾಗಬೇಡಿ: ಅತೃಪ್ತ ಶಾಸಕರಿಗೆ ಕಾಂಗ್ರೆಸ್ ನಾಯಕರ ಹಿತ ನುಡಿ
ಬೆಂಗಳೂರು, ಜ.18: ಬಿಜೆಪಿ ಒಡ್ಡುವ ಆಸೆ, ಆಮಿಷಗಳಿಗೆ ಮರುಳಾಗಬೇಡಿ. ಒಂದಷ್ಟು ದಿನ ಸಹಿಸಿಕೊಂಡು ಹೋದರೆ ಪಕ್ಷದಲ್ಲಿ ಉತ್ತಮ ಭವಿಷ್ಯ ನಿಮ್ಮದಾಗಲಿದೆ ಎಂದು ಅತೃಪ್ತ ಶಾಸಕರಿಗೆ ಕಾಂಗ್ರೆಸ್ ನಾಯಕರು ಹಿತ ನುಡಿದಿದ್ದಾರೆ.
ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಶಾಸಕಾಂಗ ಪಕ್ಷದ ವಿಶೇಷ ಸಭೆಯಲ್ಲಿ ಮಾತನಾಡಿದ ಮುಖಂಡರು, ಯಾವುದೇ ಶಾಸಕರು ಪಕ್ಷ ಹಾಗೂ ಸರಕಾರಕ್ಕೆ ಮುಜುಗರವಾಗುವಂತೆ ನಡೆದುಕೊಳ್ಳುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಯಾವುದೇ ಅಸಮಾಧಾನ, ಸಮಸ್ಯೆಗಳಿದ್ದರೂ ಅದನ್ನು ಪಕ್ಷದ ವೇದಿಕೆಯಲ್ಲೆ ಚರ್ಚೆ ಮಾಡಬೇಕು. ಬಹಿರಂಗವಾಗಿ ಅಸಮಾಧಾನ ಹೊರ ಹಾಕುವುದರಿಂದ ಏನು ಪ್ರಯೋಜನವಿಲ್ಲ. ಬಿಜೆಪಿ ಮುಖಂಡರ ಮಾತುಗಳಿಗೆ ಯಾಕೆ ಮರುಳಾಗುತ್ತಿದ್ದೀರಿ ಅನೋದು ಗೊತ್ತಾಗುತ್ತಿಲ್ಲ ಎಂದು ಅತೃಪ್ತರ ನಡೆಗೆ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ.
ಪಕ್ಷವನ್ನು ಬಿಟ್ಟು ಹೋಗುವುದು ತುಂಬಾ ಸುಲಭ. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ನಿಮಗೆ ಸಿಗುತ್ತಿರುವ ಗೌರವ ಬೇರೆ ಕಡೆ ಎಲ್ಲಿಯೂ ಸಿಗುವುದಿಲ್ಲ. ಈ ಬಗ್ಗೆ ಆಲೋಚನೆ ಮಾಡಿ. ಲೋಕಸಭಾ ಚುನಾವಣೆಯವರೆಗೆ ನಾವು ಒಗ್ಗಟ್ಟಾಗಿರಬೇಕು. ಪ್ರಧಾನಿ ನರೇಂದ್ರಮೋದಿಯ ಅಲೆ ದಿನೇ ದಿನೇ ಕಡಿಮೆಯಾಗುತ್ತಿರುವುದು, ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆ ಹಾಗೂ ನಮ್ಮ ರಾಜ್ಯದಲ್ಲಿ ನಡೆದ ಉಪ ಚುನಾವಣೆಯ ಫಲಿತಾಂಶದಿಂದ ಸಾಬೀತಾಗಿದೆ ಎಂದು ಮುಖಂಡರು ತಿಳಿಸಿದ್ದಾರೆ.