ನಾಲ್ವರು ಶಾಸಕರು ರಾಜೀನಾಮೆ ನೀಡಲ್ಲ: ಶಾಸಕ ಎಸ್.ಟಿ.ಸೋಮಶೇಖರ್
ಎಸ್.ಟಿ.ಸೋಮಶೇಖರ್
ಬೆಂಗಳೂರು, ಜ. 19: ಈಗಲ್ಟನ್ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕರು ವಾಸ್ತವ್ಯವಿದ್ದು, ನಾಲ್ವರು ಶಾಸಕರೂ ರಾಜೀನಾಮೆ ನೀಡಲ್ಲ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಹೇಳಿಕೆ ನೀಡಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಈ ಬಗ್ಗೆ ಹೇಳಿಕೆ ನೀಡಿದರು.
ನಾಗೇಂದ್ರ ಸಿ.ಎಲ್.ಪಿ ನಾಯಕರ ಜೊತೆ ಮಾತನಾಡಿದ್ದಾರೆ, ಉಮೇಶ್ ಜಾಧವ್ ಪತ್ರ ಬರೆದು ಕಾರಣ ಕೊಟ್ಟಿದ್ದಾರೆ, ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಟಳ್ಳಿ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಹೇಳಿದ್ದು ಇದರ ಬಗ್ಗೆ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಯಾವ ಅತೃಪ್ತರು ಬಿಜೆಪಿಗೆ ಹೋಗಲ್ಲ, ಯಾವುದೇ ಕಾರಣಕ್ಕೂ ಸರ್ಕಾರ ಬೀಳುವುದಿಲ್ಲ, ಸರ್ಕಾರ ಭದ್ರವಾಗಿದೆ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದರು.
ಸಮ್ಮಿಶ್ರ ಸರ್ಕಾರ ಉಳಿಸುವುದೇ ನಮ್ಮ ಶಾಸಕರ ತೀರ್ಮಾನ, ಸರ್ಕಾರ, ಸಿಎಂ ಬಗ್ಗೆ ನಮ್ಮ ಶಾಸಕರಲ್ಲಿ ಅಸಮಧಾನವಿಲ್ಲ. ಟಿಕೆಟ್ ಬೇಕಾದಾಗ ಪ್ರತಿದಿನ ಮನೆ ಬಾಗಿಲಿಗೆ ಬರುತ್ತಾರೆ. ಗೆದ್ದ ನಂತರ ಅಜೆಂಡಾ ನಮ್ಮದೇ ಎಂದು ಹೊರಡುವುದು ಎಷ್ಟು ಸರಿ ಎಂದು ಸಂಸದ ಡಿ.ಕೆ.ಸುರೇಶ್ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಶಾಸಕರ ರೆಸಾರ್ಟ್ ಹಿಂದೆ ಅನುಮಾನವಿರಲಿಲ್ಲ, ಪಕ್ಷದ ತೀರ್ಮಾನದಂತೆ ನಿರ್ಧಾರ ತೆಗೆದುಕೊಂಡಿದ್ದೇವೆ. ನಾವು ಯಾರನ್ನೂ ಬಲತ್ಕಾರವಾಗಿ ಹಿಡಿದಿಟ್ಟಿಲ್ಲ. ಕಳೆದ 10 ದಿನಗಳಿಂದ ಬಿಜೆಪಿಯವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು ಬೆಂಗಳೂರಿನ ಬಳಿಯೇ ನಮ್ಮ ಶಾಸಕರಿದ್ದಾರೆ. ಅವರನ್ನ ಬಲವಂತದಿಂದ ನಾವು ಹಿಡಿದಿಟ್ಟಿಲ್ಲ, ನಮ್ಮ ಶಾಸಕರು ಯಾವಾಗ ಬೇಕಾದರೂ ಹೋಗಬಹುದು. ನಮ್ಮ ಶಾಸಕರ ಮೇಲೆ ನಮಗೆ ಅನುಮಾನವಿಲ್ಲ, ನಾಲ್ವರು ಶಾಸಕರ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು. ಹಾಗಾಗಿ ರೆಸಾರ್ಟ್ ಬಂದಿದ್ದೇವೆ ಎಂದು ಹೇಳಿದರು.
ಆಪರೇಷನ್ ಕಮಲ ಹುಟ್ಟಿದ್ದೆ ಬಿಜೆಪಿಯವರಿಂದ. ಅವರು ಅದನ್ನೇ ಮಾಡುತ್ತಾರೆ. ಕೌಂಟರ್ ಆಪರೇಷನ್ ನಾವು ಮಾಡುತ್ತಿಲ್ಲ, ನಾವು ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸುತ್ತೇವೆ ಅಷ್ಟೇ ಎಂದು ಸಂಸದ ಸಂಸದ ಡಿ.ಕೆ.ಸುರೇಶ್ ತಿಳಿಸಿದರು.