ಗ್ರಾಮೀಣ ಸಮೃದ್ಧಿಗೆ ವಿಶಿಷ್ಟ ಕೃಷಿ ತಂತ್ರಜ್ಞಾನ: ಎಂ.ಆರ್.ದಿನೇಶ್
23ರಿಂದ ರಾಷ್ಟ್ರೀಯ ತೋಟಗಾರಿಕಾ ಮೇಳ
ಬೆಂಗಳೂರು, ಜ.19: ರೈತರ ಜೀವನ ಮಟ್ಟ ಹಾಗೂ ಆರ್ಥಿಕ ಮಟ್ಟ ಸುಧಾರಣೆಗೆ ವ್ಯವಸಾಯವನ್ನು ಲಾಭದಾಯಕ ಉದ್ಯಮವಾಗಿಸುವ ಮೂಲಕ ಗ್ರಾಮೀಣ ಸಮೃದ್ಧಿಗೆ ವಿಶಿಷ್ಟ ಕೃಷಿ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ ಎಂದು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ನಿರ್ದೇಶಕ ಎಂ.ಆರ್.ದಿನೇಶ್ ತಿಳಿಸಿದ್ದಾರೆ.
ಶನಿವಾರ ನಗರದ ಭಾರತೀಯ ತೋಟಾಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ತೋಟಗಾರಿಕಾ ಮೇಳದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರಕಾರಗಳ ಆಶಯದಂತೆ ರೈತರು ಆದಾಯವನ್ನು ದ್ವಿಗುಣಗೊಳಿಸಲು ಸಂಸ್ಥೆ ಕೈಜೋಡಿಸಿದೆ ಎಂದು ಹೇಳಿದರು.
ಈ ನಿಟ್ಟಿನಲ್ಲಿ ಪಾರಂಪಾರಿಕ ಸಾವಯವ ಕೃಷಿಯಿಂದ ರೈತರು ಹೆಚ್ಚಿನ ಆದಾಯಗಳಿಸಲು ತರಕಾರಿ, ಹಣ್ಣು, ಹೂವಿನ ವಿಶಿಷ್ಟ ತಳಿ ಹಾಗೂ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಅಲ್ಲದೆ, ನಾಟಿ ಸಮಯದಿಂದ ಕೊಯ್ಲು ಸಮಯದವರೆಗಿನ ತಂತ್ರಜ್ಞಾನವನ್ನು ರೈತರಿಗೆ ತಲುಪಿಸಲು ಇದೇ ತಿಂಗಳ 23 ರಿಂದ 25ರವರೆಗೆ ರಾಷ್ಟ್ರೀಯ ತೋಟಗಾರಿಕಾ ಮೇಳವನ್ನು ಆಯೋಜಿಸಲಾಗಿದ್ದು, ರೈತರು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.