ಜ.27 ರಿಂದ ಬಹುಭಾಷಾ ರಾಷ್ಟ್ರೀಯ ನಾಟಕೋತ್ಸವ
ಬೆಂಗಳೂರು, ಜ.22: ಮಾತಾ ಚಾರಿಟೇಬಲ್ ಟ್ರಸ್ಟ್ ಮತ್ತು ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಸಹಯೋಗದಲ್ಲಿ ಜ.27 ರಿಂದ ಆರು ದಿನಗಳವರೆಗೆ ತುಮಕೂರು ಜಿಲ್ಲೆಯ ಹುಳಿಯಾರು ನಗರದ ಸಾಂಸ್ಕೃತಿಕ ಸದನದಲ್ಲಿ ಬಹುಭಾಷಾ ರಾಷ್ಟ್ರೀಯ ನಾಟಕೋತ್ಸವವನ್ನು ಆಯೋಜಿಸಲಾಗಿದೆ.
ಮಂಗಳವಾರ ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಂಸ್ಕೃತಿಕ ಕೇಂದ್ರದ ಸದಸ್ಯ ನಂಜುಂಡಸ್ವಾಮಿ ತೊಟ್ಟವಾಡಿ, ಸಂಜೆ 6.30 ಕ್ಕೆ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ತುಮಕೂರಿನ ಲೋಕಸಭಾ ಸದಸ್ಯ ಮುದ್ದಹನುಮೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಜೆ.ಸಿ ಮಾಧುಸ್ವಾಮಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಕೆ.ಆರ್.ಸುಮತಿ ನಿರ್ದೇಶನದ (ಕನ್ನಡಕ್ಕೆ ಅನುವಾದ ಪಿ.ಲಂಕೇಶ್) ಅಂತಿಗೊನೆ, ತಮಿಳಿನ ಮತ್ವಿ ವಿಲಾಸ ಪ್ರಹಸನಂ, ಮಲೆಯಾಳಂನ ಕಾಲಭೈರವನ್, ಮರಾಠಿಯ ಮಹಾಶೂನ್ಯ ಹಾಗೂ ತೆಲುಗಿನ ಧರ್ಮವೀರ್ ಭಾರತಿ ನಾಟಕಗಳಲ್ಲಿ ವಿವಿಧ ಭಾಷೆಯ ರಂಗಕರ್ಮಿಗಳು ಅಭಿನಯಿಸಲಿದ್ದು, ಆರು ದಿನವು ಒಂದೊಂದು ನಾಟಕವನ್ನು ಪ್ರದರ್ಶನ ಮಾಡಲಿದ್ದಾರೆ ಎಂದು ಹೇಳಿದರು.