ಬಾಲಿವುಡ್ ನಟರನ್ನು ಭೇಟಿಯಾಗುವ ಪ್ರಧಾನಿಗೆ ಸಿದ್ದಗಂಗಾ ಶ್ರೀಗಳ ಅಂತ್ಯಕ್ರಿಯೆಗೆ ಬರಲು ಸಮಯವಿಲ್ಲ
ಡಿಸಿಎಂ ಪರಮೇಶ್ವರ್ ಟೀಕೆ
ಬೆಂಗಳೂರು, ಜ.23: ಮಂಗಳವಾರ ನಡೆದ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯ ಅಂತ್ಯಕ್ರಿಯೆಗೆ ಪ್ರಧಾನಿ ನರೇಂದ್ರ ಮೋದಿ ಹಾಜರಾಗದೇ ಇದ್ದುದಕ್ಕೆ ಆಕ್ಷೇಪಿಸಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಟ್ವೀಟ್ ಮಾಡಿದ್ದಾರೆ.
“ಪ್ರಧಾನಿ ಮೋದಿ ಸೆಲೆಬ್ರಿಟಿ ವಿವಾಹಗಳಲ್ಲಿ ಭಾಗವಹಿಸುತ್ತಾರೆ, ಸಿನಿಮಾ ತಾರೆಯರನ್ನು ಭೇಟಿಯಾಗುತ್ತಾರೆ, ಆದರೆ ತಮ್ಮ ಜೀವನವನ್ನು ಬಡವರಿಗೆ ಮತ್ತು ತುಳಿತಕ್ಕೊಳಗಾದವರ ಕಲ್ಯಾಣಕ್ಕೆ ಮೀಸಲಿರಿಸಿದ ನಮ್ಮ ನಡೆದಾಡುವ ದೇವರ ಅಂತ್ಯಕ್ರಿಯೆಗೆ ಹಾಜರಾಗಿಲ್ಲ. ಸ್ವಾಮೀಜಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸುವಂತೆ ಮಾಡಿದ ಸತತ ಮನವಿಗಳಿಗೂ ಕಿವಿಗೊಟ್ಟಿಲ್ಲ. ನಿಜವಾಗಿಯೂ ಕೋಟ್ಲರ್ ಪ್ರಶಸ್ತಿ ಅವರಿಗೆ (ಪ್ರಧಾನಿಗೆ) ಅರ್ಹವಾಗಿ ಸಂದಿದೆ'' ಎಂದು ಪರಮೇಶ್ವರ್ ಟ್ವೀಟ್ ಮಾಡಿದ್ದಾರೆ.
ಸ್ವಾಮೀಜಿಯ ಅಂತ್ಯಕ್ರಿಯೆಯಲ್ಲಿ ಪ್ರಧಾನಿ ಭಾಗವಹಿಸಬೇಕಿತ್ತು ಎಂದು ಹೇಳಿದ ಪರಮೇಶ್ವರ್, “ಪ್ರಧಾನಿ ಬೇರೆಲ್ಲಿ ಹೋಗಬೇಕಿತ್ತೆಂದು ನಾನು ಹೇಳುತ್ತಿಲ್ಲ, ಅಷ್ಟೊಂದು ಸಣ್ಣ ಮನಸ್ಸಿನವನೂ ನಾನಲ್ಲ. ಪ್ರಧಾನಿ ಭಾಗವಹಿಸಿದ್ದರೆ ಅದು ಅವರ ಹುದ್ದೆಯ ಘನತೆಯನ್ನು ಇನ್ನಷ್ಟು ಎತ್ತರಕ್ಕೇರಿಸುತ್ತಿತ್ತು'' ಎಂದರು.