ಸುಭಾಷ್ಚಂದ್ರ ಬೋಸ್ ಭಾವಚಿತ್ರಕ್ಕೆ ಪುಷ್ಪನಮನ
ಬೆಂಗಳೂರು, ಜ. 23: ನೇತಾಜಿ ಸುಭಾಷ್ ಚಂದ್ರಬೋಸ್ ಅವರ 122ನೆ ಜನ್ಮ ದಿನಾಚರಣೆ ಪ್ರಯುಕ್ತ ವಿಧಾನಸೌಧ ಪಶ್ಚಿಮದ್ವಾರ ಬಳಿ ಇರುವ ಅವರ ಪ್ರತಿಮೆ ಹಾಗೂ ಭಾವಚಿತ್ರಕ್ಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಪುಷ್ಪ ನಮನ ಸಲ್ಲಿಸಿದರು.
ಬುಧವಾರ ವಿಧಾನಸೌಧದಲ್ಲಿ ಸುಭಾಷ್ಚಂದ್ರಬೋಸ್ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದ ಬಳಿಕ ಪ್ರತಿಜ್ಞಾ ಬೋಧನೆ ಮಾಡಿದರು. ಅನಂತರ ಮಾತನಾಡಿದ ಅವರು, ಈ ದೇಶದ ಸ್ವಾತಂತ್ರಕ್ಕಾಗಿ ನಡೆದ ಹೋರಾಟದಲ್ಲಿ ಗಾಂಧಿ ಅಹಿಂಸಾ ಮಾರ್ಗ ಅನುಸರಿಸಿದರೆ, ನೇತಾಜಿ ಅವರು ತಮ್ಮದೆ ಹಾದಿಯಲ್ಲಿ ಹೋರಾಡಿದರು. ಬ್ರಿಟೀಷರ ಸಂಕೋಲೆಯಿಂದ ಬಿಡಿಸಿ ಸ್ವಾತಂತ್ರ್ಯ ತಂದು ಕೊಡುವಲ್ಲಿ ಇವರ ಹೋರಾಟ ದೊಡ್ಡದು.
ಅಂದಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು. ಸ್ವಾಮಿ ವಿವೇಕಾನಂದ ಆಶಯದಂತೆ ತತ್ವ ಸಿದ್ಧಾಂತವನ್ನು ಅಳವಡಿಸಿಕೊಂಡಿದ್ದರು. ಅವರು ಇನ್ನೂ ಹೆಚ್ಚು ಕಾಲ ಬದುಕಿದ್ದರೆ ಭಾರತ ಬೇರೊಂದು ಇತಿಹಾಸ ನಿರ್ಮಿಸುತ್ತಿತ್ತು. ಅವರ ಸಾವಿನ ಬಗ್ಗೆ ಅನೇಕ ಗೊಂದಲಗಳಿದ್ದು, ಯಾವುದಕ್ಕೂ ಸ್ಪಷ್ಟತೆ ಸಿಕ್ಕಿಲ್ಲ. ಆದರೆ, ಇವರ ಹೋರಾಟಕ್ಕೆ ನಾವೆಲ್ಲರೂ ಗೌರವ ಸಮರ್ಪಿಸಬೇಕು ಎಂದರು.
‘ಮೂವತ್ತು ವರ್ಷದಿಂದ ರಾಜಕಾರಣದಲ್ಲಿದ್ದೇನೆ. ಇಂತಹ ಕೀಳುಮಟ್ಟದ ರಾಜಕಾರಣವನ್ನು ಎಂದೂ ನೋಡಿರಲಿಲ್ಲ. ಈ ನಡವಳಿಕೆಗಳು ರಾಜಕೀಯ ಮೌಲ್ಯಗಳನ್ನು ಕಳೆದುಕೊಳ್ಳುವಂತೆ ಮಾಡುತ್ತಿದೆ ಎಂಬ ಆತಂಕ ಮೂಡಿದೆ. ಇದೇ ನಡವಳಿಕೆಯಿದ್ದರೆ ಮುಂದಿನ ಪೀಳಿಗೆ ರಾಜಕಾರಣಕ್ಕೆ ಬರಲು ಹಿಂಜರಿಯಬಹುದು. ಇದು ಒಳ್ಳೆಯ ಸಂದೇಶವಲ್ಲ’
-ಡಾ.ಜಿ.ಪರಮೇಶ್ವರ್ ಉಪಮುಖ್ಯಮಂತ್ರಿ